ADVERTISEMENT

ಮಾಣಿ: ಮಕ್ಕಳ ವಿಂಗಡಣೆ ಸರಿಯಲ್ಲ: ಕಾರ್ಣಿಕ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:45 IST
Last Updated 5 ಡಿಸೆಂಬರ್ 2012, 5:45 IST

ವಿಟ್ಲ: `ಅನಾಥ ಮಕ್ಕಳೆಂಬ ಪದವನ್ನು ಕಿತ್ತೆಸೆಯಲು ಸರ್ಕಾರದಿಂದ ಚಿಂತನೆ ನಡೆಯುತ್ತಿದೆ. ಮಕ್ಕಳ ಆಶ್ರಮಗಳು ಹಾಗೂ ವಿದ್ಯಾಕೇಂದ್ರಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು' ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸಲಹೆ ನೀಡಿದರು. 
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಾಣಿ ದಾರುಲ್ ಇರ್ಶಾದ್ ವಿದ್ಯಾ ಕೇಂದ್ರದಲ್ಲಿ ಭಾನುವಾರ ನಡೆದ 'ಬೆಲಿಯೆ ಪೆರ್ನಾಲ್ ಸಂದೋಲ ಕಲಾಸ್ಪರ್ಧೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಯಾವುದೇ ಮಕ್ಕಳು ಹುಟ್ಟು ಅನಾಥರೋ ಅಥವಾ ಬಡವರಲ್ಲ. ಅನಾಥರು, ಬಡವರು ಮತ್ತು ಹಿಂದುಳಿದವರೆಂದು ಮಕ್ಕಳನ್ನು ವಿಂಗಡಿಸುವುದು ಸರಿಯಲ್ಲ. ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣಬೇಕು' ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಪ್ರಸಕ್ತ ವರ್ಷ 45 ಲಕ್ಷ ರೂಪಾಯಿಗಳನ್ನು ಬ್ಯಾರಿ ಸಾಹಿತ್ಯ, ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದೆ. ಬ್ಯಾರಿ ಭವನ ನಿರ್ಮಾಣ, ವಿಶ್ವ ಬ್ಯಾರಿ ಸಮ್ಮೇಳನ ಹಾಗೂ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸುವ ಯೋಜನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.

ದಾರುಲ್ ಇರ್ಶಾದ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿದರು.
ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ಪಿ.ಎ. ರಹೀಂ ಬಿ.ಸಿ.ರೋಡು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಉಪಾಧ್ಯಕ್ಷ ಬಿ.ಎಚ್. ಖಾದರ್ ಬಂಟ್ವಾಳ, ಉದ್ಯಮಿ ಹಂಝ ಸಾಗರ್ ಶುಭ ಹಾರೈಸಿದರು.

ಅಕಾಡೆಮಿ ಸದಸ್ಯರಾದ ಯಾಕುಬ್ ಖಾದರ್ ಗುಲ್ವಾಡಿ, ಎ.ಕೆ. ಜಮಾಲುದ್ಧೀನ್ ಮಂಗಳೂರು, ಎನ್.ಎ. ಶೇಕಬ್ಬ ಎನ್.ಆರ್.ಪುರ, ದಾರುಲ್ ಇರ್ಶಾದ್ ವಿದ್ಯಾ ಕೇಂದ್ರದ ಶಿಕ್ಷಕರಾದ ಶರೀಫ್ ಸಅದಿ, ಶರೀಫ್ ಸಖಾಫಿ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ ಸ್ವಾಗತಿಸಿ, ಸದಸ್ಯ ಸಂಚಾಲಕ ಜಿ. ಮುಹಮ್ಮದ್ ಕಲ್ಲಡ್ಕ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷಣ, ಆಶು ಭಾಷಣ ಹಾಗೂ ಹಾಡುಗಾರಿಕೆ ಸ್ಪರ್ಧೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.