ADVERTISEMENT

ಮೂಲ್ಕಿ ವಿಜಯಾ ನಾಟಕ ಪಂಥ: ರಕ್ತಾಕ್ಷಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 10:15 IST
Last Updated 20 ಫೆಬ್ರುವರಿ 2012, 10:15 IST

ಮೂಲ್ಕಿ: ಮಂಗಳೂರಿನ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ನಾಟಕ `ರಕ್ತಾಕ್ಷಿ~, ಇಲ್ಲಿನ ವಿಜಯಾ ಕಾಲೇಜಿನಲ್ಲಿ ನಡೆದ ವಿಜಯಾ ನಾಟಕ ಪಂಥ 2012 ಅಂತರ ಕಾಲೇಜು ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು.

ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು. ದ್ವಿತೀಯ ಬಹುಮಾನವನ್ನು ಮಣಿಪಾಲ ಮಾಧವ ಪೈ ಮೆಮೋರಿಯಲ್ ಕಾಲೇಜಿನ `ನಾಣಜ್ಜೆರ್ ಸುದೆ ತಿರ್ಗಾಯೆರ್~ ನಾಟಕ ಪಡೆದರೆ, ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ `ಗೋಂದೋಳು~ ನಾಟಕ ತೃತೀಯ ಬಹುಮಾನ ಪಡೆಯಿತು.

ಉತ್ತಮ ನಟನಾಗಿ ಸೇಂಟ್ ಅಲೋಷಿಯಸ್ ಕಾಲೇಜಿನ ಅರುಣ್ ಕಾರಂತ್ (ಚೋರೆ ಚರಣೆ), ಉತ್ತಮ ನಟಿ ಕೆನರಾ ಕಾಲೇಜಿನ ಗ್ರೀಷ್ಮಾ (ರಕ್ತಾಕ್ಷಿಯ ರುದ್ರಾಂಬೆ), ಹಾಸ್ಯ ನಟನಾಗಿ ಹಳೆಯಂಗಡಿ ಕಾಲೇಜಿನ ಪ್ರಸಾದ್(ಅಂಚಿನ ಎಂಚಿನದ ಕಂಡಕ್ಟರ್), ಪೋಷಕ ನಟನಾಗಿ ಮಾಧವ ಪೈ ಕಾಲೇಜಿನ ಸುಷ್ಮಾ (ನಾಣಜ್ಜೆರ್ ಸುಧೆ ತಿರ್ಗಾಯೆರ್‌ನ ಸುದೆ), ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಸುಂಕದಕಟ್ಟೆ ಕಾಲೇಜಿನ ಮನು (ತೆಲಿಪುವೆರಾ ಬುಲಿಪುವೆರಾದ ಕುಡುಕ) ಪಡೆದುಕೊಂಡರು.

ಹಿರಿಯ ನಾಟಕಕಾರ ಸುಂದರ ಅಂಚನ್ ಅವರನ್ನು ಸನ್ಮಾನಿಸಲಾಯಿತು.ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ, ನಾಟಕದಿಂದ ಮನರಂಜನೆ ಜತೆಗೆ ಮನೋವಿಕಾಸ ಸಾಧ್ಯ. ವಿದ್ಯಾರ್ಥಿ ಜೀವನದಲ್ಲೇ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಹರಿಕೃಷ್ಣ ಪುನರೂರು, ಡಾ. ಗಣೇಶ್ ಅಮಿನ್ ಸಂಕಮಾರ್, ಪಾವಂಜೆ ದೇವಳದ ಸತೀಶ್ ಭಟ್, ಕಾಲೇಜಿನ ಡಾ.ಎಂ.ಎ.ಆರ್.ಕುಡ್ವಾ, ತಾಲ್ಲೂಕು ಕ.ಸಾ.ಪದ ಅಧ್ಯಕ್ಷ ಸರ್ವೋತ್ತಮ ಅಂಚನ್, ಮೂಡಾದ ಸದಸ್ಯೆ ಕಸ್ತೂರಿ ಪಂಜಾ, ಗೀತಾಂಜಲಿ ಸುವರ್ಣ, ಪಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಪ್ರೊ.ಪ್ರವಿದಾ ಬೇಗಂ,  ಕಿನ್ನಿಗೋಳಿ ಗ್ರಾ.ಪಂ.ಅಧ್ಯಕ್ಷ ದೇವಪ್ರಸಾದ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ, ತೀರ್ಪುಗಾರರಾದ ಪರಮಾನಂದ ಸಾಲ್ಯಾನ್, ಕೆಕೆ.ಬಿ.ಸುರೇಶ್, ಜಯರಾಂ ನೀಲಾವರ, ಪ್ರೊ.ನಾರಾಯಣ, ಹಯವಧನ ಉಪಾಧ್ಯಾಯ, ಪ್ರಾಣೇಶ್ ಭಟ್ ದೇಂದಡ್ಕ, ಅಭಿಜಿತ್ ಭಾಗವಹಿಸಿದ್ದರು.

ಮದ್ರಸ ಉದ್ಘಾಟನೆ ಇಂದು
ಆತೂರು (ಉಪ್ಪಿನಂಗಡಿ):
ಇಝ್ಝತ್ತುಲ್ ಇಸ್ಲಾಂ ಮದ್ರಸ ಕುಂಡಾಜೆ ಇದರ ನೂತನ ಕಟ್ಟಡ ಉದ್ಘಾಟನೆ ಮತ್ತು ಉಪನ್ಯಾಸ ಸಮಾರೋಪ ಸಮಾರಂಭವು ಸೋಮವಾರ ಜರಗಲಿದೆ ಎಂದು ಮದ್ರಸ ಸಮಿತಿ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಇಝ್ಝತ್ತುಲ್ ಇಸ್ಲಾಂ ಮದ್ರಸದ ಗೌರವಾಧ್ಯಕ್ಷ ಹಾಜಿ ಕೆ.ಎಂ. ಶಾಹ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಆತೂರು ಮಸೀದಿಯ ಮುದರ‌್ರಿಸ್ ಹಾದಿ ಇಬ್ರಾಹಿಂ ತಂಙಳ್ ಮದ್ರಸ ಉದ್ಘಾಟಿಸಲಿದ್ದಾರೆ. ರಾತ್ರಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ಯಾಲಿಕಟ್ ಖಾಝಿ ಅಸ್ಸಯ್ಯದ್ ಜಮಲುಲ್ಲೈಲಿ ತಂಙಳ್ ದುವಾ ಆಶೀರ್ವಚನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.