ADVERTISEMENT

ಯೇನಪೋಯ ಶಾಲೆಯಲ್ಲಿ ವಿಸ್ಮಯ ಜಗತ್ತು!

ಪ್ರಾದೇಶಿಕ ವಿಜ್ಞಾನ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:26 IST
Last Updated 7 ಸೆಪ್ಟೆಂಬರ್ 2013, 6:26 IST

ಮಂಗಳೂರು: ಯೇನಪೋಯ ಶಾಲೆಯಲ್ಲಿ ವಿಜ್ಞಾನದ ರಂಗೇರಿತ್ತು. ಶಾಲಾ ಮಕ್ಕಳ ವಿಜ್ಞಾನ ಕೈಚಳಕ ಎಲ್ಲರ ಗಮನ ಸೆಳೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತರಾವರಿ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು.

ಜೆಪ್ಪಿನಮೊಗರುವಿನ ಯೇನಪೋಯ ಶಾಲೆಯಲ್ಲಿ ಶುಕ್ರವಾರ ಭಾರತೀಯ ವಿಜ್ಞಾನ ಸಮಾಜದ ಸಹಯೋಗದಲ್ಲಿ ವಿಜ್ಞಾನ ಪ್ರದರ್ಶನವನ್ನು ಹಮ್ಮಿಕೊಳ್ಳ ಲಾಗಿತ್ತು. ಪ್ರದರ್ಶನದಲ್ಲಿ ವಿದ್ಯಾರ್ಥಿ ಗಳು ತಯಾರಿಸಿದ ಒಟ್ಟು 67 ವಿಜ್ಞಾನ ಮಾದರಿಗಳು ಮಕ್ಕಳ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಂತಿದ್ದವು.

ಇಂದ್ರಪ್ರಸ್ಥ ವಿದ್ಯಾಲಯದ ತಬೀಶ್ ಹಸನ್ ಅಕ್ಷಯ್ ತಯಾರಿಸಿದ್ದ ಹಸಿರು ಹೃದಯ ವಿಜ್ಞಾನ ಮಾದರಿ ಎಲ್ಲರ ಗಮನ ಸೆಳೆಯಿತು. ಪರಿಸರವನ್ನು ಕಾಪಾಡುವತ್ತ ಮಾನವ ಮಾಡಬೇಕಾದ ಕರ್ತವ್ಯಗಳನ್ನು ಅದು ಸಾರಿ ಹೇಳುತ್ತಿತ್ತು. ಪರಿಸರ ಮಾಲಿನ್ಯ ನಿಯಂತ್ರಣ, ಪರಿಸರವನ್ನು ಸ್ವಚ್ಛತೆಯತ್ತ ಕೊಂಡೊಯ್ಯಬಹುದಾದ ವಿಧಾನ ಗಳನ್ನು ಹೇಳಿಕೊಡುವತ್ತ ಅದರ ಗಮನ ವಿತ್ತು. ವಿದ್ಯಾರ್ಥಿಗಳ ಪರಿಸರ ಜಾಗೃತಿ ಹಿರಿಯರನ್ನು ಪರಿಸರಪ್ರಿಯ ಕಾರ್ಯ ದಲ್ಲಿ ತೊಡಗುವಂತೆ ಹುರಿದುಂಬಿ ಸುವಂತೆ ಇತ್ತು.

ಪುತ್ತೂರಿನ ಸುದಾನ ವಸತಿ ಶಾಲೆಯ ಸೃಜನ್ ತಯಾರಿಸಿದ್ದ ರೈಲ್ವೆ ಗೇಟ್ ಮಾದರಿ ಗಮನ ಸೆಳೆಯಿತು. ರೈಲು ಬರುತ್ತಿದ್ದಂತೆ ರೈಲ್ವೆ ಗೇಟ್ ತಂತಾನೆ ಮುಚ್ಚಿಕೊಳ್ಳುವಂತೆ ಸ್ವಯಂಚಾಲಿತ ತಂತ್ರಜ್ಞಾನವನ್ನು ವಿದ್ಯಾರ್ಥಿ ಬಳಸಿದ್ದು ಕುತೂಹಲ ಮೂಡಿಸುವಂತಿತ್ತು. ರೈಲು ಮೂರ‌್ನಾಲ್ಕು ಕಿಲೋಮೀಟರ್ ದೂರದಲ್ಲಿ ಇರುವಾಗಲೇ ಗೇಟ್‌ಗಳು ಮುಚ್ಚಿಕೊಳ್ಳುವ ವ್ಯವಸ್ಥೆ ಇರುವಂತೆ ತಂತ್ರಜ್ಞಾನ ರೂಪಿಸಿದ್ದು, ಸುರಕ್ಷೆಗೂ ವಿದ್ಯಾರ್ಥಿಗಳು ನೀಡಿದ್ದ ಮಹತ್ವಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಯೇನಪೋಯ ಶಾಲೆಯ ಶಶಾಂಕ್ ಹಾಗೂ ನರಸಿಂಹ ತಯಾರಿಸಿದ್ದ ಕೈಚಾಲಿತ ಮೊಬೈಲ್ ಚಾರ್ಜರ್ ಅಚ್ಚರಿ ಮೂಡಿಸಿತು. ಸಣ್ಣ ಕೀಲಿಯೊಂದನ್ನು ತಿರುಗಿಸುವ ಮೂಲಕ, ಚಾರ್ಜರ್‌ಗೆ ಮೊಬೈಲ್ ಅನ್ನು ಸಿಕ್ಕಿಸಿದರೆ ಸಾಕು, ಡೈನಮೊ ಮೂಲಕ ವಿದ್ಯುತ್ ಪ್ರಸರಿಸಿ ಮೊಬೈಲ್ ಚಾರ್ಜ್ ಆಗುತ್ತಿತ್ತು. ವಿದ್ಯುತ್ ಇಲ್ಲದೆಯೂ ಮೊಬೈಲ್ ಚಾರ್ಜ್ ಮಾಡುವ ಈ ಮಾದರಿಗೆ ಎಲ್ಲರ ಮೆಚ್ಚುಗೆ ಸಿಕ್ಕಿತು.

ಇದೇ ರೀತಿ ಜಿರಳೆ ಓಡಿಸುವ ಸ್ಪ್ರೇ, ಬಯೋಗ್ಯಾಸ್ ಮಾದರಿ, ನೈಸರ್ಗಿಕ ಹವಾನಿಯಂತ್ರಣ ವ್ಯವಸ್ಥೆ, ಧಾನ್ಯ ರಕ್ಷಿಸುವ ನೈಸರ್ಗಿಕ ವಿಧಾನ, ತೆಂಗಿನ ಎಣ್ಣೆಯ ಸೋಪು, ಎಲ್‌ಪಿಜಿ ಸೋರಿಕೆ ಪತ್ತೆ ಹಚ್ಚುವ ಯಂತ್ರ ಇನ್ನೂ ಮುಂತಾದ ಮಾದರಿಗಳು ವಿದ್ಯಾರ್ಥಿಗಳ ವಿಜ್ಞಾನ ನೈಪುಣ್ಯತೆಯನ್ನು ತೋರಿಸಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುರತ್ಕಲ್‌ನ ಎನ್‌ಐಟಿಕೆ ನಿರ್ದೇಶಕ ಪ್ರೊ.ಸ್ವಪನ್ ಭಟ್ಟಾ ಚಾರ್ಯ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಬೇಕು. ಅದರಿಂದ ಇಡೀ ಸಮಾಜದ ಅಭಿವೃದ್ಧಿ ಯನ್ನು ನಿರೀಕ್ಷಿಸಬಹುದು ಎಂದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಸಂಘದ ಪ್ರಧಾನ ವ್ಯವಸ್ಥಾಪಕ ಡಾ.ಬಿ.ವಿ. ಸತ್ಯ ನಾರಾಯಣ, ಪಿಲಿಕುಳ ನಿಸರ್ಗಧಾಮ ನಿದೇರ್ಶಕ ಪ್ರೊ.ವಿ.ಕೆ.ರಾವ್ ಗೌರವ ಅತಿಥಿಗಳಾಗಿದ್ದರು. ಯೇನಪೋಯ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಫರ್ಹಾದ್ ಯೇನಪೋಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಸಿ.ಕೆ. ಮಂಜುನಾಥ್, ಭಾರ ತೀಯ ವಿಜ್ಞಾನ ಸಮಾಜದ ಅಧ್ಯಕ್ಷ ನಾರಾಯಣ ಅಯ್ಯರ್  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.