ADVERTISEMENT

ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಮ್ಮ ಗುರಿಯಾಗಬೇಕು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 8:39 IST
Last Updated 27 ಅಕ್ಟೋಬರ್ 2017, 8:39 IST

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ದಿಶೀಲ ಕಾರ್ಯವೈಖರಿಯಿಂದ ದೇಶ ಹೊಸ ಚೈತನ್ಯ ಪಡೆದುಕೊಂಡಿದ್ದು, ಅವರ ಆಡಳಿತಕ್ಕೆ ಬಲ ತುಂಬುವ ಸಲುವಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಬೇಕು ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.

ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪದೊಂದಿಗೆ ನವಕರ್ನಾಟಕ ನಿರ್ಮಾಣ ಅಂಗವಾಗಿ ಬಿಳಿನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಶಕ್ತಿ ಶಾಲಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಸ್ವಚ್ಛ ಹಾಗೂ ಅಭಿವೃದ್ದಿಶೀಲ ಆಡಳಿತದ ಕಾರ್ಯವೈಖರಿಯನ್ನು ಕಂಡು ದೇಶದಾದ್ಯಂತ ಯುವ ಜನಾಂಗ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದು, ಇಡೀ ಭಾರತ ದೇಶವನ್ನು ಕಾಂಗ್ರೆಸ್ ಮುಕ್ತ ಬಿಜೆಪಿಯನ್ನಾಗಿಸುವುದರೊಂದಿಗೆ ಕರ್ನಾಟಕದ ಕಾಂಗ್ರೆಸ್ ಅನ್ನು ಕಿತ್ತೊಗೆದು ನವಕರ್ನಾಟಕ ನಿರ್ಮಾಣ ಮಾಡುವಲ್ಲಿ ಯುವಜನಾಂಗ ಪಣತೊಡಬೇಕು ಎಂದರು.

ADVERTISEMENT

ಕಡಬ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಪ್ರಧಾನಿಯವರ ಜನಪರ ಯೋಜನೆಗಳನ್ನು ಪ್ರತೀ ಬೂತ್ ಮಟ್ಟದಲ್ಲಿ ಮತದಾರರಿಗೆ ತಿಳಿಸುವುದಲ್ಲದೆ ಕಾಂಗ್ರೆಸ್‍ನ ದುರ್ನಡತೆಯ ಬಗ್ಗೆ ಜನತೆಯನ್ನು ಎಚ್ಚರಿಸುವ ಜವಾಬ್ದಾರಿ ನಮ್ಮದಾಗಿದ್ದು ಈ ಬಾರೀ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ತರುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.

ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಗೌಡ, ಬಿಳಿನೆಲೆ ಸಿಎ ಬೇಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ, ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಇದ್ದರು. ಯುವಮೋರ್ಚಾ ಸದಸ್ಯ ರಾಜೇಶ್ ಸ್ವಾಗತಿಸಿ, ಹರ್ಷಿತ್ ವಂದಿಸಿದರು. ಸರೋಜಿನಿ ಜಯಪ್ರಕಾಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.