ADVERTISEMENT

ರಾಮಕೃಷ್ಣ ಮಿಷನ್‌ 5ನೇ ಹಂತಕ್ಕೆ ಸಜ್ಜು

ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಏಕಗಮ್ಯಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:25 IST
Last Updated 18 ಜೂನ್ 2018, 5:25 IST
ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಸಂದರ್ಭ ಸ್ವಾಮಿ ಏಕಗಮ್ಯಾನಂದಜೀ ಕಾರ್ಯಕರ್ತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. – ಪ್ರಜಾವಾಣಿ ಚಿತ್ರ
ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಸಂದರ್ಭ ಸ್ವಾಮಿ ಏಕಗಮ್ಯಾನಂದಜೀ ಕಾರ್ಯಕರ್ತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. – ಪ್ರಜಾವಾಣಿ ಚಿತ್ರ   

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36ನೇ ಶ್ರಮದಾನವನ್ನು  ಉರ್ವ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜನೆ ಮಾಡಿದ್ದು, ಅಮಿತ ಉತ್ಸಾಹದಿಂದ ಸ್ವಯಂಸೇವಕರು ಬಂದಿದ್ದರು.

ಆದರೆ ನಿರಂತರ ಮಳೆ ಸುರಿಯುತ್ತಿದ್ದುದರಿಂದ ಸಣ್ಣ ಪ್ರಮಾಣದಲ್ಲಿ ಸ್ವಚ್ಛತೆಯ ಕೆಲಸ ಮಾಡಿ ಬಳಿಕ ಸ್ವಚ್ಛಭಾರತ ಅಭಿಯಾನದ ಸಂಚಾಲಕ ಏಕಗಮ್ಯಾನಂದಜೀ ಮತ್ತು ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರು ಸ್ವಚ್ಛತೆಯ ಕುರಿತು ಅನುಭವಗಳನ್ನು ವಿವರಿಸಿದರು.

’ಮೂರೂವರೆ ವರ್ಷಗಳಿಂದ ಕಾರ್ಯಕರ್ತರ ಅಪರಿಮಿತ ಉತ್ಸಾಹ ಹಾಗೂ ಶಕ್ತಿಯಿಂದಾಗಿ ಈ ಅಭಿಯಾನ ಯಶಸ್ವಿಯಾಗುತ್ತಿದೆ. ಇದು ಕೇವಲ ಕಸಗುಡಿಸಿ ಬೀದಿಗಳನ್ನು ಸ್ವಚ್ಛ ಮಾಡುವ ಕಾರ್ಯವಲ್ಲ. ಬದಲಿಗೆ ಮನಸ್ಸುಗಳನ್ನು ಶುದ್ಧಗೊಳಿಸಿ, ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಅಭಿಯಾನವಾಗಿ ಮುನ್ನಡೆಯುತ್ತಿರುವುದು ವಿಶೇಷ. ಸಮಾಜಸೇವೆ ಮಾಡಬಯಸುವ ಯುವಕರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಈ ಅಭಿಯಾನಕ್ಕಿದೆ. ಇದೊಂದು ರಾಜಕೀಯೇತರ ಚಳವಳಿಯಾಗಿ ಜಾತಿ-ಮತ-ಪಂಥಗಳನ್ನು ಮೀರಿ, ಮೇಲು-ಕೀಳುಗಳೆನ್ನದೆ ಸಕಲರನ್ನೂ ಒಗ್ಗೂಡಿಸಿದ  ಅಭಿಯಾನವಾಗಿದೆ’ ಎಂದು ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.

ADVERTISEMENT

‘ನಗರದ ಸ್ವಚ್ಛತೆ ಹಾಗೂ ಹಿತಕ್ಕಾಗಿ ಒಂದಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಈ ಅಭಿಯಾನದಲ್ಲಿ ಕಾಣಬಹುದಾಗಿದೆ. ಇಲ್ಲಿಯತನಕ ನಾವು ಕೇವಲ ಶ್ರಮದಾನದ ಮುಖಾಂತರ ಕೆಲಸ ಮಾಡುತ್ತಿದ್ದೆವು, ಈಗ ಜನಜಾಗೃತಿಯ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರಿ ವ್ಯವಸ್ಥೆಯ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಮುಂಬರುವ ಐದನೇ ಹಂತದ ಅಭಿಯಾನವನ್ನು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಯೋಜಿಸಲಾಗುತ್ತಿದೆ’  ಎಂದರು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ’ಸ್ವಚ್ಛತೆಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಈ ಅಭಿಯಾನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ನಿಸ್ವಾರ್ಥತೆಯಿಂದ ಒಂದಿಷ್ಟು ಯೋಚನೆ ಮಾಡುವಂತಾದರೆ ಇಡೀ ಭಾರತ ಬದಲಾಗಲು ಸಾಧ್ಯ’ ಎಂದರು.

ಪ್ರಾಧ್ಯಾಪಕ ಪ್ರೊ. ಶೇಷಪ್ಪ ಅಮೀನ್, ಮುಸಾ ಶರೀಫ್, ಕುದ್ರೋಳಿ ಗಣೇಶ್, ಕಮಲಾಕ್ಷ ಪೈ, ಯೋಗಿಶ್ ಕಾಯರ್ತಡ್ಕ, ಪಿಯೂಷ್ ಶೆಣೈ ಅನಿಸಿಕೆಗಳನ್ನು ಹಂಚಿಕೊಂಡರು.

ವಿಚಾರ ವಿನಿಮಯದ ಬಳಿಕ ಸುಮಾರು ಒಂದು ಗಂಟೆ ಶ್ರಮದಾನ ಮಾಡಲಾಯಿತು. ಉರ್ವ ಮಾರ್ಕೆಟ್ ಬಸ್ ತಂಗುದಾಣಕ್ಕೆ ಅಂಟಿಸಲಾಗಿದ್ದ ಪೋಸ್ಟರ್‌ ಕಿತ್ತು ಶುಚಿಮಾಡಿ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛಗೊಳಿಸಲಾಯಿತು. ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿ ತೆಗೆಯಲಾಯಿತು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್ ಹೆಕ್ಕಿ ತೆಗೆಯಲಾಯಿತು. ಕಾರ್ಯಕರ್ತರು ನಗರದ ಬೇರೆಬೇರೆ ಕಡೆಗಳಲ್ಲಿ ಹೋಗಿ ಪೋಸ್ಟರ್‌ ಬ್ಯಾನರ್ ತೆರವು ಮಾಡಿದರು.

ಅರ್ಕುಳದಲ್ಲಿ ಸ್ವಚ್ಛ ಗ್ರಾಮ

ಅರ್ಕುಳ ಮೇರ್ಲಪದವು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಮೇರ್ಲಪದವಿನಿಂದ ವಳಚ್ಚಿಲ ಶಾಲೆಯ ವರೆಗೆಗಿನ ತೋಡು ಹಾಗೂ ಒಳಚರಂಡಿಗಳನ್ನು ಶುಚಿಗೊಳಿಸಲಾಯಿತು. ಜೊತೆಗೆ ರಸ್ತೆಗಳ ಎರಡೂ ಬದಿಗಳನ್ನು ಗುಡಿಸಿ ಶುಚಿಗೊಳಿಸಲಾಯಿತು. ಯಾದವ ಗಾಣಿಗಾ, ನಿಶ್ಚಿತಾ ಎಸ್. ಬಿ, ರಾಜೇಶ್ ನವಜ್ಯೋತಿ ನಗರ, ಅಶೋಕ ಕೊಟ್ಟಾರಿ, ರಾಜೇಶ್ ಶೆಟ್ಟಿ, ಪ್ರಶಾಂತ ಪೂಜಾರಿ, ನಾಗನಾಗಣಿ ಕ್ಷೇತ್ರದ ಸದಸ್ಯರು ಹಾಗೂ ಗ್ರಾಮಸ್ಥರು ಈ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದರು. ಜಯರಾಮ್ ಶೆಟ್ಟಿಗಾರ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ಇಮ್ತಿಯಾಜ್ ಶೇಖ್, ಅಕ್ಷಿತ ಚಿಂಜಾರು, ಸುಮಾ ಕೋಡಿಕಲ್, ಸಾರಿಕಾ ಅವಿನಾಶ್, ಸತೀಶ್ ಮೂಡಿಗೆರೆ, ಪುನೀತ್ ಬೋಳಾರ, ಪೂಜಾ ರಾಜ್, ಸುಬ್ರಾಯ್ ಭಟ್ ಪಾಲ್ಗೊಂಡರು. ದಿಲ್ ರಾಜ್ ಆಳ್ವ ಕಾರ್ಯಕ್ರಮನ್ನು ಸಂಯೊಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.