ಮೂಡುಬಿದಿರೆ: `ವಾಹನ ಸವಾರರಿಗೆ ಸುರಕ್ಷತೆಯ ಬಗ್ಗೆ ಕಾಳಜಿ ಮತ್ತು ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರ ಬಗ್ಗೆ ಗೌರವ ಇರಬೇಕು' ಎಂದು ಅಟೋ ಮ್ಯೋಟ್ರಿಕ್ಸ್ ಮತ್ತು ಹೋಂಡಾ ಮ್ಯೋಟ್ರಿಕ್ಸ್ನ ರಾಜೇಂದ್ರ ಕುಮಾರ್ ಹೇಳಿದರು.
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಇದರ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಭಾನುವಾರ ಕಾಲೇಜಿನ ಆವರಣದಲ್ಲಿ ನಡೆದ `ಮೋಟೋರಿಗ್' ದ್ವಿಚಕ್ರ ಮತ್ತು ಚತುಷ್ಕಕ್ರ ವಾಹನ ಪ್ರದರ್ಶನ, ಸಾಹಸ ಪ್ರಾತ್ಯಕ್ಷಿಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಮಾತನಾಡಿ, ಮಿಜಾರುಗುತ್ತು ಆನಂದ ಆಳ್ವರು ಅಂದಿನ ದಿನಗಳಲ್ಲಿ ಮಿಜಾರು ಕಂಬಳದ ಮೂಲಕ ಮಂಗಳೂರು ಭಾಗದ ಗಮನ ಸೆಳೆದಿದ್ದರು. ಅವರ ಮಗ ಮೋಹನ ಆಳ್ವರು ಶಿಕ್ಷಣ ಕ್ರಾಂತಿಯ ಮೂಲಕ ರಾಜ್ಯ, ರಾಷ್ಟ್ರದ ಗಮನ ಸೆಳೆದಿದ್ದಾರೆ. ಅವರ ಮಗ ವಿವೇಕ್ ಆಳ್ವ ಅಟೋಮೊಬೈಲ್ ಕ್ಷೇತ್ರದ ಕ್ರಾಂತಿಯನ್ನು ಮಿಜಾರಿಗೆ ಪರಿಚಯಿಸಿ ಸಾಧನೆಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ' ಎಂದು ಪ್ರಶಂಸಿಸಿದರು.
ಪ್ರದರ್ಶನದ ಸಂಚಾಲಕರಾದ ಕುಲದೀಪ್ ಎಂ, ಅಬುಲ್ ಅಲಾ, ಯು.ಪಿ.ಸಿ.ಎಲ್ ಉಪಾಧ್ಯಕ್ಷ ಕಿಶೋರ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಕೆ.ವಿ.ಸುರೇಶ್ ಉಪಸ್ಥಿತರಿದ್ದರು. ಉಪನ್ಯಾಸಕ ರುಚಿರ್ ಆನಂದ್ ನಿರೂಪಿಸಿ, ಮುದ್ದುಕೃಷ್ಣ ವಂದಿಸಿದರು.
ಸಾಹಸ ಪ್ರದರ್ಶನ: ಮಿಜಾರಿನಲ್ಲಿ ಇದೇ ಮೊದಲ ಬಾರಿಗೆ ದ್ವಿಚಕ್ರ ಮತ್ತು ಚತುಷ್ಚಕ್ರ ಕ್ಷೇತ್ರದ ಅಗ್ರ ಶ್ರೇಣಿಯ ಸುಮಾರು 60ರಷ್ಟು ಕಾರು, ಬೈಕುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
ಹೊಸ ಹಾಗೂ ಹಳೆ ಮಾದರಿಯ ಕಾರು ಹಾಗೂ ಬೈಕ್ ಪ್ರದರ್ಶನಗಳು ವಾಹನ ಪ್ರೇಮಿಗಳ ಗಮನಸೆಳೆದವು. ಕೊನೆಯಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ದ್ವಿಚಕ್ರ ವಾಹನಗಳ ಸಾಹಸ ಪ್ರದರ್ಶನ, ವೈವಿಧ್ಯಮಯ ಕಸರತ್ತುಗಳು ಪ್ರೇಕ್ಷಕರನ್ನು ರಂಜಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.