ADVERTISEMENT

ವಿದ್ಯೆ ದೋಚಲಾಗದ ಸಂಪತ್ತು: ಭೋಜರಾಜ್‌

ಸೇಂಟ್‌ ಅಲೋಶಿಯಸ್ ಐಟಿಐ ಕಾಲೇಜಿನ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 20 ಮೇ 2018, 11:58 IST
Last Updated 20 ಮೇ 2018, 11:58 IST

ಮಂಗಳೂರು: ‘ನಾವು ನಮ್ಮ ಜೀವನದಲ್ಲಿ ವಿದ್ಯೆಯನ್ನು ಕಲಿಯುವುದು ತುಂಬಾ ಮುಖ್ಯ. ವಿದ್ಯೆಯೊಂದಿದ್ದರೆ ನಾವು ಜೀವನದಲ್ಲಿ ಏನ್ನನ್ನು ಬೇಕಾದರೂ ಸಾಧಿಸಬಹುದು. ನಾವು ಸಂಪಾದಿಸಿದ ಹಣ, ಆಸ್ತಿ ಇವೆಲ್ಲವನ್ನು ಯಾರು ಬೇಕಾದರೂ ದೋಚಬಹುದು. ಆದರೆ ನಾವು ಕಲಿತ ವಿಧ್ಯೆಯನ್ನು ಯಾರಿಂದಲೂ ದೋಚಲು ಸಾಧ್ಯವಿಲ್ಲ ಎಂದು ಚಲನಚಿತ್ರ ನಟ ಭೋಜರಾಜ್ ವಾಮಂಜೂರು ಹೇಳಿದರು.

ನಗರದ ಸೇಂಟ್‌ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜರುಗಿದ ಸೇಂಟ್‌ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಮಾಜ ಸೇವಕ ರಾಜೇಂದ್ರ ಕೆ.ಪಿ. ಮಾತನಾಡಿ, ‘ನಾವು ನಮ್ಮ ಜೀವನದಲ್ಲಿ ಕನಸುಗಳನ್ನು ಕಾಣಬೇಕು. ಅದನ್ನು ಸಾಧಿಸುವಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಆಗ ಮಾತ್ರ ನಾವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಿ ಒಂದು ಉತ್ತಮ ಬದುಕನ್ನು ರೂಪಿಸಲು ಸಾಧ್ಯ ಎಂದರು.

ADVERTISEMENT

ಸಂಸ್ಥೆಯ ಮಾಜಿ ನಿರ್ದೇಶಕ ರೆ.ಫಾ. ಲಿಯೊ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಐಟಿಐ ತರಬೇತಿಯನ್ನು ಪಡೆಯುತ್ತಿದ್ದೇವೆ, ಇತರರಂತೆ ನಮ್ಮಲ್ಲಿ ಯಾವುದೇ ಉನ್ನತ ಪದವಿ ಇಲ್ಲ ಎಂದು ಕೀಳರಿಮೆಯನ್ನು ಬೆಳೆಸಿಕೊಳ್ಳಬಾರದು. ಬೇರೆಲ್ಲಾ ಪದವಿಗಳನ್ನು ಪಡೆದವರು ಇಂದು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತಾಂತ್ರಿಕ ಶಿಕ್ಷಣ ಪಡೆದಂತಹ ವಿದ್ಯಾರ್ಥಿಗಳಿಗೆ ಯಾವತ್ತೂ ನಿರುದ್ಯೋಗ ಎಂಬುವುದು ಇಲ್ಲ. ಆದ್ದರಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಕಡೆಗೆ ಆಸಕ್ತಿಯನ್ನು ತೋರಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಕಾರ್ಯದಶಿ ರೆ.ಫಾ. ಡೆನ್ಜಿಲ್ ಲೋಬೊ ಮಾತನಾಡಿ, ನಮ್ಮ ದೇಶವು ಒಂದು ಕಡೆ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದರೂ, ಇನ್ನೊಂದೆಡೆ ದ್ವೇಷ, ಅಸೂಯೆ, ಭೃಷ್ಟಾಚಾರ, ಜಾತಿವಾದ ಇಂತಹ ಹಲವಾರು ವಿಚಾರಗಳಿಂದ ಶಾಂತಿಭಂಗಕ್ಕೂ ಕಾರಣವಾಗುತ್ತಿದೆ. ನಾವೆಲ್ಲರೂ ನಮ್ಮಲ್ಲಿ ಸಮರ್ಪಣಾ ಮನೋಭಾವ, ತ್ಯಾಗ ಇತ್ಯಾದಿಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಮಾಜವನ್ನು ಕಟ್ಟಿಕೊಳ್ಳುವ ದೂತರಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ರಸ್ಕೀನ್ಹಾ, ಸಂಸ್ಥೆಯ ನಿರ್ದೇಶಕ ರೆ.ಫಾ. ಎರಿಕ್ ಮಥಾಯಸ್, ಪ್ರಾಂಶುಪಾಲ ವಿನ್ಸೆಂಟ್ ಮೆಂಡೋನ್ಸಾ, ಕಾರ್ಯಕ್ರಮದ ಸಂಯೋಜಕರಾದ ಉಮೇಶ್ ಜೆ.ಎ., ವಿದ್ಯಾರ್ಥಿ ಪರಿಷತ್ ನಾಯಕ ತಿಲಕ್ ಎಂ. ವೇದಿಕೆಯಲ್ಲಿದ್ದರು.

ಅಧ್ಯಾಪಕರಾದ ರೋಬಿನ್ ವಾಸ್ ಮತ್ತು ಶ್ರೀ ಕಿರಣ್ ಡಿಸೋಜ ಸಂಸ್ಥೆಯ ವಾರ್ಷಿಕ ವರದಿಯನ್ನು ಎಲ್.ಸಿ.ಡಿ. ಮೂಲಕ ಪ್ರದರ್ಶಿಸಿದರು. ವಿದ್ಯಾರ್ಥಿ ಗ್ಯಾರಲ್ ಮಿಲ್ಟನ್ ಲೋಬೊ ನಿರೂಪಿಸಿದರು. ಪ್ರವೀಣ್ ಡಿಸೋಜ ವಂದಿಸಿದರು.

ವಿದ್ಯಾರ್ಥಿನಿಯರು ಸ್ವಾಗತ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ವೃತ್ತಿ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ತರಬೇತಿದಾರರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ಜಾನಪದ ನೃತ್ಯಗಳ ಪ್ರದರ್ಶನ ನಡೆಯಿತು.

**
ನಮ್ಮ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಒಂದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು
–  ರೆ.ಫಾ. ಲಿಯೊ ಡಿಸೋಜ, ಸಂಸ್ಥೆಯ ಮಾಜಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.