ADVERTISEMENT

ಶಿರ್ಲಾಲು: ಗ್ರಾಮಸ್ಥರಿಂದ ಪ್ರತಿಭಟನೆ

ಅಸಮರ್ಪಕ ರಸ್ತೆ ಕಾಮಗಾರಿ: ಗುತ್ತಿಗೆದಾರ, ಎಂಜಿನಿಯರ್‌ ವಿರುದ್ಧ ಆಕ್ರೋಶ -

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:50 IST
Last Updated 17 ಮೇ 2018, 5:50 IST
ಕೆದ್ದು -ಶಿರ್ಲಾಲು ರಸ್ತೆಯ ಅಸಮರ್ಪಕ ಕಾಮಗಾರಿಯ ವಿರುದ್ಧ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿರುವುದು.
ಕೆದ್ದು -ಶಿರ್ಲಾಲು ರಸ್ತೆಯ ಅಸಮರ್ಪಕ ಕಾಮಗಾರಿಯ ವಿರುದ್ಧ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿರುವುದು.   

ಬೆಳ್ತಂಗಡಿ: ಚುನಾವಣಾ ಫಲಿತಾಂಶ ಬಂದ ಬಳಿಕ ಮೊತ್ತ ಮೊದಲ ಪ್ರತಿಭಟನೆ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಬಳಿ ಬುಧವಾರ ನಡೆಯಿತು.

ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿಂದ ಶಿರ್ಲಾಲು ತನಕದ ಸುಮಾರು 3.8 ಕಿ.ಮೀ. ರಸ್ತೆ ಹದೆಗೆಟ್ಟಿದ್ದು ಶಿರ್ಲಾಲು ಎಂಬಲ್ಲಿ ಸುಮಾರು 100 ಮೀಟರ್‌ ರಸ್ತೆಯ ಡಾಂಬರೀಕರಣ ಚುನಾವಣಾ ಪೂರ್ವದಲ್ಲಿ ನಡೆದಿತ್ತು. ಆದರೆ ಕಳೆದ ಕೆಲ ದಿನಗಳಿಂದ ಡಾಮರ್‌ ಕಳಚಿ ಹೋಗುತ್ತಿರುವುದು ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಬುಧವಾರ ಪ್ರದೇಶದ ಜನರು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮೂಲಕ ಗುತ್ತಿಗೆದಾರ ಹಾಗೂ ಎಂಜಿನಿಯರ್ ವಿರುದ್ಧ ಆಕ್ರೋಶ ತೋರಿಸಿದರು. ಇದರಿಂದ ಬೆಳಗಿನಿಂದ ಮಧ್ಯಾಹ್ನದ ವರೆಗೆ ವಾಹನ ಸಂಚಾರವಿಲ್ಲದೆ ಜನರು ಪರದಾಡುವಂತಾಯಿತು.

ರಸ್ತೆ ವಿಸ್ತರಣೆ ಕಾಮಗಾರಿ ಕಳೆದ ಅಕ್ಟೋಬರ್‍ನಿಂದ ನಡೆಯುತ್ತಿತ್ತು. ಬಳಿಕ ಚುನಾವಣೆಯ ನೆಪದಲ್ಲಿ ಒಂದೂವರೆ ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಅಸಮರ್ಪಕ ಕಾಮ ಗಾರಿಯಿಂದಾಗಿ ಬಸ್‌ ಉರುಳಿದ ಅಪಘಾತವೂ ಸಂಭವಿಸಿತ್ತು. ಇಲ್ಲಿನ ಕಳಪೆ ಕಾಮಗಾರಿಯ ವಿರುದ್ದ ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗಕ್ಕೆ ದೂರ ವಾಣಿ ಮೂಲಕ ದೂರು ನೀಡಲಾಗಿತ್ತು. ಗುತ್ತಿಗೆದಾರರು ದೂರವಾಣಿ ಕರೆಯನ್ನೇ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ನಾಗರಿ ಕರೆಲ್ಲ ಸೇರಿ ಪ್ರತಿಭಟನೆಯನ್ನು ಮಾಡುವುದೆಂದು ನಿರ್ಧರಿಸಿ ಬೆಳಿಗ್ಗೆ 8.30 ರಿಂದ ವಾಹನಗಳು ಸಂಚರಿಸ ದಂತೆ ತಡೆಯೊಡ್ಡಿದರು.

ADVERTISEMENT

ಇಲ್ಲಿನ 3.8 ಕಿ.ಮೀ.ಉದ್ದದ ರಸ್ತೆಗೆ ₹ 2.85 ಕೋಟಿ ಅನುದಾನ ಮಂಜೂರಾಗಿದ್ದು, ಗುಣಮಟ್ಟ ಹಾಳಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದನ್ನು ಪರೀಕ್ಷಿಸಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು. ಇದಕ್ಕೆ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಚುನಾವಣೆಯ ಸಂದರ್ಭ ಇದ್ದುದರಿಂದ ಸರಿಯಾಗಿ ನೋಡಲಾಗಲಿಲ್ಲ ಎಂದು ಎಂಜಿನಿಯರಿಂಗ್ ವಿಭಾಗದವರೊಬ್ಬರು ವಿವರಿಸಿದರಾದರೂ ಅದನ್ನು ಲಿಖಿತ ವಾಗಿ ಕೊಡುವಂತೆ ಆಗ್ರಹ ಪಡಿಸಿ ದರು.

ಕೂಡಲೇ ಮರು ಡಾಮರೀಕರಣ ಮಾಡಬೇಕು ಇಲ್ಲವಾದಲ್ಲಿ ರಾಜ್ಯ ಹೆದ್ದಾರಿ ತಡೆ ಮಾಡುವೆವು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಅಳದಂಗಡಿ ಗ್ರಾ‌ಮ ಪಂಚಾಯಿತಿ ಸದಸ್ಯ ಸದಾನಂದ ಪೂಜಾರಿ ಉಂಗಿಲ ಬೈಲು ಅವರು ಪ್ರತಿಭಟನಾಕಾರರನ್ನು ಸಮಾಧಾನಿಸಿ ಎಂಜಿನಿಯರ್ ಶಿವಪ್ರಸಾದ ಅಜಿಲ ಅವರು ಸಂಜೆ ವೇಳೆ ಮಾತನಾಡಲಿದ್ದಾರೆಂದು ಭರವಸೆ ನೀಡಿದರು. ಸಂಜೆ ಬಂದ ಎಂಜಿನಿಯರ್‌ ಅವರು ‘ಇದೇ 20 ರಂದು ಕಾಮಗಾರಿಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ರಸ್ತೆ ತಡೆ ಹಿಂದಕ್ಕೆ ಪಡೆಯಲಾಯಿತು.

‘ಕಳಪೆ ಡಾಂಬರೀಕರಣ’

ಕಳೆಪ ಡಾಂಬರೀಕರಣ ಮಾಡಿರುವುದನ್ನು ಮಾಧ್ಯಮದರಿಗೆ ತೋರಿಸಿದರು. ರಸ್ತೆ ಡಾಮರ್‌ ಕೈಯಲ್ಲಿ ತೆಗೆಯುವಂತಹ ಸ್ಥಿತಿಯಲ್ಲಿರುವುದನ್ನು ಪ್ರತಿಭಟನಾಕಾರರು ತೋರಿಸಿದರು. ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಂಗಳವಾರ ಎಂಜಿನಿಯರಿಂಗ್‌ ವಿಭಾಗ, ಪೋಲಿಸ್ ಇಲಾಖೆ, ಕಂದಾಯ ಇಲಾಖೆಗಳಿಗೆ ತಿಳಿಸಲಾಗಿತ್ತು. ಆದರೆ ಮಧ್ಯಾಹ್ನವಾದರೂ ಬರಬೇಕಾದವರು ಬರಲಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಸಮೀಪದಲ್ಲೇ ಇರುವ ಮೋರಿ ಕಾಮಗಾರಿಯೂ ಕಳಪೆಯಾಗಿರುವುದನ್ನು ಉಲ್ಲೇಖಿಸಿದರು.

‘ಲಾಠಿ ಪ್ರಹಾರದ ಎಚ್ಚರಿಕೆ’

ಚುನಾವಣಾ ನಿಮಿತ್ತ 144 ಸೆಕ್ಷನ್ ಇರುವುದನ್ನು ಪ್ರತಿಭಟನಾಕಾರರ ಗಮನಕ್ಕೆ ವೇಣೂರು ಪೋಲಿಸರು ತಂದರು. ಇದನ್ನು ಗಮನಕ್ಕೆ ತಂದು ಕೊಳ್ಳದೆ ಪ್ರತಿಭಟನೆಯನ್ನು ಮುಂದುವರಿಸಿದರು. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ವೇಣೂರು ಠಾಣಾಧಿಕಾರಿ, ಸಿಬ್ಬಂದಿ ಬಂದು ‘ಪ್ರತಿಭಟನೆ ನಿಲ್ಲಿಸದಿದ್ದರೆ ಲಾಠಿ ಪ್ರಹಾರ ಮಾಡಬೇಕಾದ ಪರಿಸ್ಥಿತಿ ಬರಬಹುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.