ಶಿರ್ವ (ಕಟಪಾಡಿ): ಉಡುಪಿ ತಾಲ್ಲೂಕು ಪಂಚಾಯಿತಿ, ರೋಟರಿ ಕ್ಲಬ್ ಶಿರ್ವ, ಪಶು ಚಿಕಿತ್ಸಾಲಯ ಮತ್ತು ಉಡುಪಿಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶಿರ್ವ ರೋಟರಿ ಸಭಾಭವನ ಬಂಟಕಲ್ನಲ್ಲಿ ಇತ್ತೀಚೆಗೆ `ಹಟ್ಟಿ ಪದ್ಧತಿಯಲ್ಲಿ ಆಡು ಸಾಕಣೆ ತರಬೇತಿ~ ಒಂದು ದಿನದ ಕಾರ್ಯಾಗಾರ ನಡೆಯಿತು.
ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ದೇವದಾಸ ಹೆಬ್ಬಾರ್ ಕಾರ್ಯಾಗಾರ ಉದ್ಘಾಟಿಸಿದರು. ರೈತರ ಇಂದಿನ ಸ್ಥಿತಿಗತಿ, ವೈಜ್ಞಾನಿಕ ಕ್ರಮದಲ್ಲಿ ಆಡು ಸಾಕಣೆಯ ಅವಶ್ಯಕತೆ ಮತ್ತು ಸ್ವಸಹಾಯ ಗುಂಪುಗಳು ಒಟ್ಟಾಗಿ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಾಗ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಅವರು ಕಿವಿಮಾತು ಹೇಳಿದರು.
ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಂ.ಟಿ.ಮಂಜುನಾಥ್, ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಮಿತಿ ವತಿಯಿಂದ ನಡೆಯುವ ವಿವಿಧ ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜಿ.ಪಂ.ಸದಸ್ಯೆ ಐಡಾ ಗಿಬ್ಬ ಡಿಸೋಜ, ತಾ.ಪಂ. ಸದಸ್ಯ ಕೃಷ್ಣ ಪೂಜಾರಿ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್, ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಮೇರಿ ಡಿಸೋಜ ಅತಿಥಿಗಳಾಗಿದ್ದರು.
ಶಿರ್ವ ಗ್ರಾ.ಪಂ. ಅಧ್ಯಕ್ಷೆ ವನಿತಾ ಕಮಲಾಕ್ಷ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ, ಹಿರಿಯಡ್ಕ ಪಶು ವೈದ್ಯಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಶಿಬಿರದ ನಿರ್ದೇಶಕ ಡಾ.ಅರುಣ್ ಹೆಗ್ಡೆ ಇದ್ದರು.
ಮಾಹಿತಿ ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ಎಂ.ಟಿ. ಮಂಜುನಾಥ್ `ಆಡು ಸಾಕಣೆ, ಪ್ರಸ್ತುತ ಸ್ಥಿತಿಗತಿ ಮತ್ತು ಉದ್ಯೋಗಾವಕಾಶಗಳು, ತಳಿಗಳು, ತಳಿ ಸಂವರ್ಧನೆ~ ಬಗ್ಗೆ ಹಿರಿಯಡ್ಕ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ `ಆಡುಗಳ ವಸತಿ ಮತ್ತು ಹಟ್ಟಿಯ ವಿನ್ಯಾಸಗಳು~, ಉಡುಪಿ ತಾಂತ್ರಿಕ ಸಹಾಯಕ ನಿರ್ದೇಶಕ ಡಾ. ಶಿವಕುಮಾರ್ `ಆಹಾರ ಮತ್ತು ಪೋಷಣೆ, ಆಹಾರ ಸಂರಕ್ಷಣೆ, ರೋಗಗಳು ಮತ್ತು ಪರಿಹಾರೋಪಾಯಗಳು~, ಉಡುಪಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಂಕರ್ ಶೆಟ್ಟಿ `ಆಡು ಸಾಕಣೆಯ ಆರ್ಥಿಕತೆ ಹಾಗೂ ಯೋಜನಾ ವರದಿ~ ಬಗ್ಗೆ ಮಾಹಿತಿ ನೀಡಿದರು. ದಿನವಿಡೀ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳ ಪರ ಗಣಪತಿ ಪ್ರಭು ಪಾಲಮೆ, ಶಾರದೇಶ್ವರಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.