ADVERTISEMENT

ಶಿಶಿಲ ಸಂವತ್ಸರ ಸಂಭ್ರಮ-: ಅಕ್ಷರ ವಂದನೆ

ಸುಳ್ಯದಲ್ಲೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:30 IST
Last Updated 16 ಡಿಸೆಂಬರ್ 2013, 6:30 IST

ಸುಳ್ಯ: ವಿನೂತನ, ವೈಶಿಷ್ಟ್ಯಪೂರ್ಣ, ಮಾದರಿ ಕಾರ್ಯಕ್ರಮಕ್ಕೆ ಭಾನುವಾರ ಸುಳ್ಯ ಸಾಕ್ಷಿ­ಯಾಯಿತು. ಸಾಹಿತಿ, ಅರ್ಥಶಾಸ್ತ್ರಜ್ಞ, ಕಲಾವಿದ, ಸುಳ್ಯ ನೆಹರೂ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಅಕ್ಷರ ವಂದನೆ ಮತ್ತು ಗುರುವಂದನೆ ಸಲ್ಲಿಸುವ ಮೂಲಕ ಅರ್ಥಪೂರ್ಣ ವಾಗಿಸಿದರು.

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ಬೆಳಿಗ್ಗೆ ಅಕ್ಷರ ವಂದನೆ ನಡೆಯಿತು. ಶಿಶಿಲರು ತಾವು ಬರೆದ 6 ಕೃತಿಗಳನ್ನು ಅವರ ಶಿಷ್ಯರ ಮೂಲಕ ಬಿಡುಗಡೆ ಮಾಡಿಸಿದರು.

ಸುಬ್ರಾಯ ಸಂಪಾಜೆ, ಸುಂದರ ಕೇನಾಜೆ, ರಾಧಾಕೃಷ್ಣ ಕಲ್ಚಾರ್, ಸಿತಾರಾಮ ಕೇವಳ, ಸ್ಮಿತಾ ಅಮೃತರಾಜ್, ಮಾಧವ ಪೆರಾಜೆ ಬಿಡುಗಡೆ­ಗೊಳಿಸಿದರು. ಶಿಶಿಲರ ಕೃತಿಗಳಲ್ಲಿ ಕಲಾತ್ಮಕತೆ­ಯೊಂದಿಗೆ ವೈಚಾರಿಕೆತೆಗೆ ಹೆಚ್ಚಿನ ಒತ್ತನ್ನು ನೀಡಿರುವುದನ್ನು ಕಾಣಬಹುದು, ನಿವೃತ್ತ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಹಿತ್ಯ ಕೃತಿಗಳು ಅವರಿಂದ ಮೂಡಿ ಬರಲಿ ಎಂದು ಸುಬ್ರಾಯ ಸಂಪಾಜೆ ಹೇಳಿದರು.

ಮಾತುಗಾರಿಕೆ, ಬರವಣಿಗೆ ಎರಡೂ ಗುಣಗಳು ಇರುವ ಶಿಶಿಲರು ಅದ್ಭುತ ಸಾಧಕ. ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗೆಲುವಿನ ತುಡಿತದ ಕಡೆಗೆ ಹೋಗುವ ಗುಣ ಅವರಲ್ಲಿ ಇದೆ. ಸೈದ್ಧಾಂತಿಕ ಚೌಕಟ್ಟು, ಸತ್ಯದ ಪ್ರತಿಪಾದನೆ ಅವರ ಲೇಖನದಲ್ಲಿ ಕಾಣಬಹುದು ಎಂದು ಸುಂದರ ಕೇನಾಜೆ ಹೇಳಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಪಡ್ಡಂಬೈಲು ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ನಂತರ ಗುರುವಂದನೆ ನಡೆಯಿತು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಏಳಿಗೆಗೆ ಕಾರಣರಾದ ಒಟ್ಟು 6 ಮಂದಿ ಶಿಕ್ಷಕರನ್ನು ಶಿಶಿಲ ಅವರು ಸನ್ಮಾನಿಸಿದರು.

ಶಿಶಿಲದ ನಿವೃತ್ತ ಮುಖ್ಯೊಪಾಧ್ಯಾಯ ಶಿವರಾಮ ಶಿಶಿಲ, ಕಟೀಲಿನ ನಿವೃತ್ತ ಮುಖ್ಯೋಪಾಧ್ಯಾಯ ರಮಾನಂದ ರಾವ್, ಶಿರ್ತಾಡಿಯ ಭವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್‌ನ ಜಗತ್ಪಾಲ ಅರಿಗ ಧರ್ಮಸ್ಥಳ, ಅಳಿಕೆಯ ನಿವೃತ್ತ ಉಪನ್ಯಾಸಕ ಕೆ.ವಿ.ಸುಬ್ರಾಯ, ಮೈಸೂರು ಮಹಾಜನ ಸ್ನಾತಕೋತ್ತರ ಕೇಂದ್ರದ ಸಿ.ಕೆ.ರೇಣುಕಾರ್ಯ ಅವರನ್ನು ಶಿಶಿಲ ಗೌರವಿಸಿದರು.
ಸಾಮಾನ್ಯವಾಗಿ ಮಠಾಧೀಶರಿಗೆ ಗುರುವಂದನೆ­ಯನ್ನು ಸಲ್ಲಿಸುತ್ತಾರೆ. ಆದರೆ ತಮ್ಮ ಜೀವನಕ್ಕೆ ಮಹತ್ತರ ತಿರುವು ನೀಡಿದ ನೈಜ ಗುರುಗಳಿಗೆ ತಾವುು ಗುರು ವಂದನೆ ಸಲ್ಲಿಸುವುದಾಗಿ ಶಿಶಿಲ ಹೇಳಿದರು.

ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್, ಶಿಶಿಲರ ಪತ್ನಿ ಶೈಲಿ ಪ್ರಭಾಕರ್, ಧನಂಜಯ ಅಡ್ಪಂಗಾಯ, ಪದ್ಮಾಕೋಲ್ಚಾರ್, ಚಂದ್ರಶೇಖರ್ ಪೇರಾಲು, ರಂಜನ್ ಪಾರೆಪ್ಪಾಡಿ, ಲತಾ ಮಧುಸೂದನ್ ವೇದಿಕೆಯಲ್ಲಿದ್ದರು.

ಕೆ.ಆರ್.ಗೋಪಾಲಕೃಷ್ಣ ಅವರಿಂದ ಭಾವಗೀತೆ, ಸುಬ್ರಾಯ ಸಂಪಾಜೆ ಬಳಗದವರಿಂದ ತಾಳಮದ್ದಲೆ, ವಿದ್ಯಾರ್ಥಿ ವೃಂದದಿಂದ ವಿನೋದಾವಳಿ ನಡೆಯದವು. ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು. ಬೇಬಿವಿದ್ಯಾ, ಅಚ್ಚುತ ಅಟ್ಲೂರು ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT