ADVERTISEMENT

ಸುರತ್ಕಲ್‌ ಮಾರುಕಟ್ಟೆ: ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 8:43 IST
Last Updated 5 ಮಾರ್ಚ್ 2018, 8:43 IST

ಮಂಗಳೂರು: ಸುರತ್ಕಲ್‌ನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಾರುಕಟ್ಟೆಯ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮತ್ತು ಮಳಿಗೆಗಳಲ್ಲಿ ಬದಲಾವಣೆಗೆ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಡಿವೈಎಫ್‌ಐ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಧರಣಿ ಆರಂಭವಾಗಿತ್ತು. ಡಿವೈಎಫ್‌ಐ ಮುಖಂಡರು ಮತ್ತು ಸುರತ್ಕಲ್‌ ಮಾರುಕಟ್ಟೆಯ ಹಲವು ವ್ಯಾಪಾರಿಗಳು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ರಾತ್ರಿಯೂ ಧರಣಿ ಮುಂದುವರಿದಿದೆ. ಮುನೀರ್‌ ಅವರೊಂದಿಗೆ ಡಿವೈಎಫ್‌ಐ ಮುಖಂಡ ಬಿ.ಕೆ.ಇಮ್ತಿಯಾಝ್‌, ವ್ಯಾಪಾರಿಗಳಾದ ದೀಕ್ಷಿತ್‌ ಶೆಟ್ಟಿ, ಯಾದವ ಶೆಟ್ಟಿಗಾರ್, ಎಂ.ಡಿ.ಇಸ್ಮಾಯಿಲ್‌, ಅಶ್ರಫ್‌, ಅಜ್ಮಲ್‌ ಸೇರಿದಂತೆ ಹಲವರು ಭಾನುವಾರ ಧರಣಿಯಲ್ಲಿ ಭಾಗಿಯಾಗಿದ್ದಾರೆ.

ಭಾನುವಾರ ನಸುಕಿನ ಜಾವ 3.30ರ ಸುಮಾರಿಗೆ ಧರಣಿನಿರತರು ಸ್ನಾನ, ಶೌಚ ಕ್ರಿಯೆಗಾಗಿ ಸ್ಥಳದಿಂದ ಹೊರಹೋಗಿದ್ದರು. ಅವರು ಬರುವ ಮುನ್ನವೇ ಕೆಲವು ಅಂಗಡಿಗಳಲ್ಲಿ ನಿರ್ಮಾಣ ಕಾರ್ಯ ಮುಂದುವರಿದಿದೆ. ಮೊದಲು ವಿನ್ಯಾಸ ಬದಲಾವಣೆ ಮಾಡಿ ಗೋಡೆ ಒಡೆದಿದ್ದ ಕೆಲವು ಅಂಗಡಿಗಳಲ್ಲಿ ಎರಡು ಅಡಿಗಳಷ್ಟು ಗೋಡೆಯನ್ನು ತರಾತುರಿಯಲ್ಲಿ ಕಟ್ಟಲಾಗಿದೆ ಎಂದು ಧರಣಿನಿರತರು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.