ADVERTISEMENT

ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 7:44 IST
Last Updated 14 ಜೂನ್ 2017, 7:44 IST
ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಮಂಗಳವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇದ್ದರು.  	ಪ್ರಜಾವಾಣಿ ಚಿತ್ರ
ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಮಂಗಳವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇದ್ದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಅಡ್ಡಹೊಳೆಯಿಂದ ಬಿ.ಸಿ. ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಯನ್ನು (ಎನ್‌ಎಚ್‌ 75) ಚತುಷ್ಪಥವಾಗಿ ವಿಸ್ತರಿಸುವ ಕಾಮಗಾರಿ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್‌ ಅಂಡ್‌ ಟಿ ಕಂಪೆನಿಯ ಅಧಿಕಾರಿಗಳು ತಿಳಿಸಿದರು.

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಮಂಗಳ ವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಸಿದ ಕೇಂದ್ರ ಪುರಸ್ಕೃತ ಯೋಜ ನೆಗಳು ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎನ್‌ಎಚ್‌– 75ರ ಚತುಷ್ಪಥ ಕಾಮಗಾರಿ ಕುರಿತು ಚರ್ಚೆ ನಡೆಯಿತು. ಆಗ ಉತ್ತರ ನೀಡಿದ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿ ಗೆದಾರರ ಪ್ರತಿನಿಧಿಗಳು, ಸೆಪ್ಟೆಂಬರ್‌ ಮೊದಲ ವಾರವೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಭರಸವೆ ನೀಡಿದರು.

‘ಈ ಕಾಮಗಾರಿಗಾಗಿ ಅಡ್ಡಹೊಳೆ ಯಿಂದ ಬಿ.ಸಿ.ರೋಡ್‌ವರೆಗೆ 270.60 ಹೆಕ್ಟೇರ್‌ ಜಮೀನನ್ನು ಸ್ವಾಧೀನಪಡಿಸಿ ಕೊಳ್ಳಬೇಕಿತ್ತು. ಈವರೆಗೆ 251.54 ಹೆಕ್ಟೇರ್‌ ವಿಸ್ತೀರ್ಣದ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. 15.02 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊ ಳ್ಳುವುದು ಬಾಕಿ ಇದ್ದು, ಆಗಸ್ಟ್‌ ಅಂತ್ಯ ದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಜಮೀನನ್ನು ಎನ್‌ಎಚ್‌ಎಐ ಸ್ವಾಧೀನಕ್ಕೆ ನೀಡ ಲಾಗುವುದು’ ಎಂದು ಈ ಯೋಜನೆಯ ಭೂಸ್ವಾಧೀನಾಧಿಕಾರಿ ಜಿ.ಆರ್‌.ಮಂಜುನಾಥ್‌ ತಿಳಿಸಿದರು.

ADVERTISEMENT

‘ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಉಪ್ಪಿ ನಂಗಡಿಯಿಂದ ಗುಂಡ್ಯದವರೆಗೆ ಸುಮಾರು 7,000 ಮರಗಳನ್ನು ಕಡಿಯ ಬೇಕಿದೆ. ಈಗಾಗಲೇ 4,500 ಮರಗಳನ್ನು ಕಡಿಯಲಾಗಿದೆ. ಪ್ರತಿದಿನ 50 ಮರಗಳನ್ನು ಕಟಾವು ಮಾಡುತ್ತಿದ್ದು, ಇದಕ್ಕಾಗಿ ದಿನದ 6ರಿಂದ 7 ಗಂಟೆ ಯಷ್ಟು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಪಾಣೆಮಂಗಳೂರು, ನರಿಕೊಂಬು ಮತ್ತು ಕಲ್ಲಡ್ಕ ಗ್ರಾಮಗಳಲ್ಲಿ ಭೂಸ್ವಾ ಧೀನ ಬಾಕಿ ಇದೆ. ಸೆಪ್ಟೆಂಬರ್‌ ಮೊದಲ ವಾರ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಗುಂಡ್ಯ ಹೊಳೆ ಬಳಿ ಇರುವ ಕಲ್ಲುಬಂಡೆಯನ್ನು ಸ್ಫೋಟಿಸಿ ತೆರವು ಮಾಡಬೇಕಿದೆ. ಪ್ರತಿದಿನ ಅರ್ಧ ಕಿ.ಮೀ. ರಸ್ತೆ ನಿರ್ಮಿ ಸುವ ಗುರಿ ಹೊಂದಲಾಗಿದೆ’ ಎಂದು ಎಲ್‌ ಅಂಡ್‌ ಟಿ ಕಂಪೆನಿಯ ಯೋಜನಾ ಅಧಿಕಾರಿ ವಾದಿರಾಜ ಬಿ. ಕಟ್ಟಿ ತಿಳಿಸಿದರು.

ತಲಪಾಡಿ– ಕುಂದಾಪುರ ಮಾರ್ಗದ ಲ್ಲಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿ ವಿಳಂಬವಾಗಿ ನಡೆಯುತ್ತಿರು ವುದಕ್ಕೆ ಸಂಸದರು ಸಭೆಯಲ್ಲಿ ಅಸಮಾ ಧಾನ ವ್ಯಕ್ತಪಡಿಸಿದರು. ಆಗ ಉತ್ತರ ನೀಡಿದ ಎಚ್‌ಎಚ್‌ಎಐ ಕಿರಿಯ ಎಂಜಿ ನಿಯರ್‌ ಅಜಿತ್‌ಕುಮಾರ್‌, ‘ತೊಕ್ಕೊಟ್ಟು ಮೇಲುಸೇತುವೆ ಕಾಮಗಾರಿ ಜನವ ರಿಯಲ್ಲಿ ಪೂರ್ಣಗೊಳ್ಳಲಿದೆ. ಪಂಪ್‌ ವೆಲ್‌ ವೃತ್ತದ ಮೇಲುಸೇತುವೆ ಕಾಮ ಗಾರಿ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

₹ 107 ಕೋಟಿ ಗುರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್‌ಆರ್‌ಇಜಿಎ) ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ₹ 107.09 ಕೋಟಿ ಅನುದಾನ ಬಳಸುವ ಗುರಿ ಹೊಂದಲಾಗಿದೆ.

ಇದರಿಂದ 24. 03 ಲಕ್ಷ ಮಾನವ ದಿನಗಳ ಕೂಲಿ ಸೃಜನೆಯಾಗಲಿದೆ. 1,000 ಕಿಂಡಿ ಅಣೆ ಕಟ್ಟು, 2,300 ತೆರೆದ ಬಾವಿ, 1,000 ಕೊಳವೆ ಬಾವಿಗಳ ಮರು ಪೂರಣ ವ್ಯವಸ್ಥೆ, 663 ಮಳೆನೀರು ಸಂಗ್ರಹ ಘಟಕ, 40 ಅಂಗನವಾಡಿ ಕಟ್ಟಡ, 27 ಶಾಲಾ ಕಟ್ಟಡ, ಸ್ತ್ರೀ ಶಕ್ತಿ ಗುಂಪುಗಳಿಗಾಗಿ 50 ವರ್ಕ್‌ಶೆಡ್‌ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್‌.ಆರ್‌.ಉಮೇಶ್‌ ಸಭೆಗೆ ಮಾಹಿತಿ ನೀಡಿದರು.

‘ಈವರೆಗೆ 320 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. 149 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ ಎನ್‌ಆರ್‌ ಇಜಿಎ ಯೋಜನೆ ಅಡಿಯಲ್ಲಿ ₹ 1.87 ಕೋಟಿ ಅನುದಾನ ಬಳಕೆ ಮಾಡ ಲಾಗಿದೆ’ ಎಂದು ವಿವರಿಸಿದರು.

ಎನ್‌ಜಿಒಗಳಿಗೆ ತರಾಟೆ: ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ತರಬೇತಿ ಯೋಜನೆಯಡಿ ಫಲಾನುಭವಿಗಳಿಗೆ ತರಬೇತಿ ನೀಡಲು ಆಯ್ಕೆಯಾಗಿರುವ ಸರ್ಕಾರೇತರ ಸಂಸ್ಥೆಗಳ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂದು ನಳಿನ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ಸಂಸ್ಥೆ ಯೊಂದರ ಪ್ರತಿನಿಧಿಯೊಬ್ಬರನ್ನು ತೀವ್ರ ವಾಗಿ ತರಾಟೆಗೆ ತೆಗೆದುಕೊಂಡರು.

‘ಈ ಯೋಜನೆಯಡಿ ತರಬೇತಿ ನೀಡುವುದಕ್ಕಾಗಿ ಆಯ್ಕೆಯಾಗಿರುವ ಸಂಸ್ಥೆಗಳ ಕೆಲಸ ನಿರೀಕ್ಷಿತ ಮಟ್ಟದಲ್ಲಿಲ್ಲ. 1,000 ಫಲಾನುಭವಿಗಳಿಗೆ ತರಬೇತಿ ನೀಡುವ ಗುರಿ ಸಾಧಿಸಿಲ್ಲ. ತರಬೇತಿ ಪಡೆದ 440 ಮಂದಿಯಲ್ಲಿ 252 ಮಂದಿಗೆ ಮಾತ್ರ ಉದ್ಯೋಗ ದೊರಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ. ಆರ್. ರವಿ ಬೇಸರ ವ್ಯಕ್ತಪಡಿಸಿದರು.

2,000 ಮನೆಗಳ ನಿರ್ಮಾಣ: ಕೇಂದ್ರ ಸರ್ಕಾರದ ವಸತಿ ಯೋಜನೆಗಳ ಅಡಿಯಲ್ಲಿ ಪದವು ಗ್ರಾಮದ ರಾಜೀವ್‌ ನಗರ, ಸುರತ್ಕಲ್‌ ಮತ್ತು ಇಡ್ಯಾ ಗ್ರಾಮಗ ಳಲ್ಲಿ 2,000 ಮನೆಗಳನ್ನು ನಿರ್ಮಿಸ ಲಾಗುತ್ತಿದೆ. ಈ ಪೈಕಿ 930 ಫಲಾನು ಭವಿಗಳ ಆಯ್ಕೆ ಮಾಡಲಾಗಿದೆ. ಉಳಿದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿ ಯಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್‌ ವಿವರ ನೀಡಿದರು.

ಅಮೃತ್‌ ಯೋಜನೆಯಡಿ ಲಭ್ಯವಾ ಗಿರುವ ₹ 185.52 ಕೋಟಿಯಲ್ಲಿ ₹ 179.52 ಕೋಟಿಯನ್ನು ಒಳಚರಂಡಿ ಕಾಮಗಾರಿಗೆ ಬಳಕೆ ಮಾಡುತ್ತಿರು ವುದಕ್ಕೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.