ಮಂಗಳೂರು: ದೇಶದ ಅಭಿವೃದ್ಧಿಯಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ಅಪಾರವಾದುದು. ಸಮಾಜದ ಎಲ್ಲ ವರ್ಗದವರನ್ನೂ ಸಮಾನ ದೃಷ್ಟಿಯಲ್ಲಿ ನೋಡಿದ ಒಬ್ಬ ಧೀಮಂತ ಮಹಿಳೆ. ಅವರ ಚಿಂತನೆಯಲ್ಲಿ ದೇಶದ ಹಿತ ಅಡಗಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
ನಗರದ ಜೆಪ್ಪು ಸೇಂಟ್ ಜೋಸೆಫ್ ಪ್ರಶಾಂತಿ ನಿಲಯ ಆಶ್ರಮದಲ್ಲಿ ನಡೆದ ಸೋನಿಯಾ ಗಾಂಧಿ ಹುಟ್ಟುಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ಅನಾಥರಿಗೆ ಹಣ್ಣು ಹಂಪಲು ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೊ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.
ಮೋದಿ ಪ್ರಧಾನಿ ಕನಸು: ಮಧ್ಯಪ್ರದೇಶ, ದೆಹಲಿ, ಛತ್ತೀಸ್ಗಡ, ರಾಜಸ್ತಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಮೋದಿ ಅಲೆಯಿಂದ ಎನ್ನುವ ಮಾತು ತಪ್ಪು. ಮೋದಿಯ ಅಲೆ ಇದ್ದರೆ 11 ತಿಂಗಳ ಹಿಂದೆ ಕರ್ನಾಟಕ, ಉತ್ತರಾಖಂಡದಲ್ಲಿ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದರು.
ಇದು ಕೇವಲ ಒಂದು ಸುತ್ತಿನ ಬಿಜೆಪಿಯ ಕಸರತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಾಂಗ್ರೆಸ್ ಪಕ್ಷ. ಮೋದಿ ಪ್ರಧಾನಿ ಆಗುವುದು ಕೇವಲ ಕನಸಿನ ಮಾತು ಎಂದು ತಿಳಿಸಿದರು.
4 ರಾಜ್ಯದಲ್ಲಿ ಕಾಂಗ್ರೆಸ್ಗೆ ಆದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರ ವಹಿಸುವುದು ಖಚಿತ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.