ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ.ಜಿ. ಅವರು ಸತತ 24 ಗಂಟೆ ‘ಬಾಲಗಾನ ಯಶೋಯಾನ’ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಈ ಕಾರ್ಯಕ್ರಮ ಬುಧವಾರ ಮಧ್ಯಾಹ್ನ 3ರವರೆಗೆ ಮುಂದುವರಿಯಿತು. ಗಾಯಕ ಎಸ್ಪಿಬಿ ಹಾಡಿರುವ ಕನ್ನಡ ಚಿತ್ರಗೀತೆಗಳು (ಶೇ 90ರಷ್ಟು), ಭಕ್ತಿ ಗೀತೆಗಳು (ಶೇ 5ರಷ್ಟು) ಹಾಗೂ ಭಾವಗೀತೆಗಳು ಸೇರಿ (ಶೇ 5ರಷ್ಟು) ಯಶವಂತ ಅವರು 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದರು. ಪ್ರತಿ ಗಂಟೆಗೊಮ್ಮೆ ಕೇವಲ 5 ನಿಮಿಷಗಳ ವಿರಾಮ ಪಡೆದರು. ಒಂದು ಗಂಟೆ ನಿಂತುಕೊಂಡು ಹಾಡಿದರೆ, ನಂತರ ಒಂದು ಗಂಟೆ ಕುಳಿತು ಹಾಡಿದರು. ಯಾವುದೇ ಘನ ಆಹಾರ ಸ್ವೀಕರಿಸದೇ ಕೇವಲ ಹಣ್ಣಿನ ರಸ ಮತ್ತು ನೀರನ್ನು ಸೇವಿಸಿದರು.
ಗಿಟಾರ್ನಲ್ಲಿ ರಾಜ್ಗೋಪಾಲ್, ಕೀಬೋರ್ಡ್ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ., ತಬಲದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷಾ ಬಸ್ರೂರ್ ಹಾಗೂ ಸಿತಾರ್ನಲ್ಲಿ ಸುಮುಖ್ ಆಚಾರ್ಯ ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ಸ್ಥಾನ ಗಿಟ್ಟಿಸುವ ಪ್ರಯತ್ನವೂ ನಡೆದಿದೆ. ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನ ಏಷ್ಯಾ ವಿಭಾಗದ ಮುಖ್ಯಸ್ಥ ಡಿ.ಮನೀಶ್ ವಿಷ್ನೋಯ್ ಖುದ್ದು ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು.
ವಿರಾಜಪೇಟೆ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಮಲ್ಲಿಕಾ ಶೆಟ್ಟಿ, ಕರಾವಳಿ ಸಂಗೀತ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಉದ್ಯಮಿಗಳಾದ ರಾಘವೇಂದ್ರ ಆಚಾರ್ಯ, ಕೆ.ಕೆ.ನೌಷಾದ್ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಮ್ಯಾಂಡೋಲಿನ್ ವಾದಕ ದೇವರಾಜ ಆಚಾರ್, ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್, ಸಂಗೀತ ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.