ಕಲ್ಲಬೆಟ್ಟು (ಮೂಡುಬಿದಿರೆ): ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಮುಂದಿನ ವರ್ಷದಿಂದ ಸರಕಾರಿ ಶಾಲೆಗಳಲ್ಲಿ 5 ಮತ್ತು 6ನೇ ತರಗತಿ ಹಾಗೂ ಪಿಯುಸಿ ಹಂತಗಳಲ್ಲಿ ಕೇಂದ್ರ ಮಾದರಿಯ ಪಠ್ಯಕ್ರಮ ಜಾರಿಗೆ ತರಲಾಗುವುದು ಎಂದು ರಾಜ್ಯದ ಉ್ನನತ ಶಿಕ್ಷಣ ಸಚಿವ ವಿ.ಎಸ್ ಆಚಾರ್ಯ ಹೇಳಿದರು.
ಕಲ್ಲಬೆಟ್ಟುನಲ್ಲಿ ಎಂ.ಕೆ. ಶೆಟ್ಟಿ ಸೆಂಟ್ರಲ್ ಸ್ಕೂಲ್ನ ನೂತನ ಕಟ್ಟವನ್ನು ಶನಿವಾರ ಅವರು ಉದ್ಘಾಟಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆಗೆ ಪ್ರಾಥಮಿಕ ಹಂತದ ಮಕ್ಕಳನ್ನು ಸಿದ್ಧಗೊಳಿಸಲು ರಾಜ್ಯದಲ್ಲೂ ಕೇಂದ್ರೀಯ ಪಠ್ಯಕ್ರಮವನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿಕ್ಷಣದಿಂದ ವ್ಯಕ್ತಿಯ ಭವಿಷ್ಯ ನಿರ್ಮಾಣವಾಗುತ್ತದೆ. ಈ ಮೂಲಕ ಸಮಾಜ, ದೇಶ ಬಲಿಷ್ಠವಾಗುತ್ತದೆ. ಈ ಉದ್ದೇಶವಿಟ್ಟುಕೊಂಡೆ ದೇಶದ ಬೇರ್ಯಾವ ರಾಜ್ಯ ಸರ್ಕಾರಗಳು ಕೊಡದಷ್ಟು ಅನುದಾನವನ್ನು ಕರ್ನಾಟಕ ಸರ್ಕಾರ ಶಿಕ್ಷಣಕ್ಕೆ ನೀಡುತ್ತಿದೆ. ಶಿಕ್ಷಣಕ್ಕೆ ವ್ಯಯಿಸಿದ ಹಣ ಮತ್ತು ಮಾಡಿದ ಪರಿಶ್ರಮ ವ್ಯರ್ಥ ಆಗದು ಎಂದರು.
ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮಾತನಾಡಿ, ಸಂಕುಚಿತ ಮನೋಭಾವದವರು ನೀಡುವ ಶಿಕ್ಷಣದಿಂದ ಕಲಿತವರ ಮನಸ್ಸು ಕೂಡ ಸಂಕುಚಿತವಾಗುತ್ತದೆ.
ಮುಕ್ತವಾಗಿ ಆಲೋಚಿಸುವ, ಉತ್ತಮ ಪರಿಸರ ನಿರ್ಮಿಸುವ ಜಾತ್ಯತೀತ ಮನೋಭಾವದ ಶಿಕ್ಷಣ ಇಂದು ಅಗತ್ಯವಿದೆ ಎಂದರು.
ದ.ಕ. ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೈಲಜಾ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪುರಸಭೆ ಅಧ್ಯಕ್ಷ ಎ.ರತ್ನಾಕರ ದೇವಾಡಿಗ, ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.