ಬಂಧನ
(ಪ್ರಾತಿನಿಧಿಕ ಚಿತ್ರ)
ಬಂಟ್ವಾಳ: ತಾಲ್ಲೂಕಿನ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿದೆ.
ಬಂಟ್ವಾಳ ತಾಲ್ಲೂಕಿ ಪುದು ಗ್ರಾಮದ ರಂಜಿತ್ ಅಲಿಯಾಸ್ ರಂಜು (35) ಬಂಧಿತ ಆರೋಪಿ. ಆತನನ್ನು ಬಂಟ್ವಾಳ ತಾಲ್ಲೂಕಿನ ರಾಯಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿ ನಗರ ಭದ್ರಕಾಳಿ ದೇವಸ್ಥಾನ ಬಳಿಯ ನಿವಾಸಿ ಪೃಥ್ವಿರಾಜ್ (21) ಹಾಗೂ ಬಂಟ್ವಾಳದ ನಿವಾಸಿ ಚಿಂತನ್ (19), ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27), ಅಭಿನ್ ರೈ (32) ಹಾಗೂ ಬಡಗಬೆಳ್ಳೂರು ಗ್ರಾಮದ ತೇಜಾಕ್ಷ (24) ಮತ್ತು ರವಿರಾಜ್ (23), ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ನಿವಾಸಿ ರವಿ ಸಂಜಯ್ (29), ಅಮ್ಮುಂಜೆ ಗ್ರಾಮದ ನಿವಾಸಿ ಶಾಹಿತ್ ಅಲಿಯಾಸ್ ಸಾಹಿತ್ (24), ಪುದು ಗ್ರಾಮದ ನಿವಾಸಿ ಸಚಿನ್ಅಲಿಯಾಸ್ ಸಚ್ಚು ರೊಟ್ಟಿ ಗುಡ್ಡೆ (32) ಎಂಬುವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.
ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರನ್ನು ಇರಾಕೋಡಿಯಲ್ಲಿ ಮೇ 27ರಂದು ಹತ್ಯೆ ಮಾಡಲಾಗಿತ್ತು. ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.