ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೌರವ ಗ್ರಂಥವೊಂದನ್ನು ಅರ್ಪಿಸಲು ನಿರ್ಧರಿಸಲಾಗಿದ್ದು, ಅದರ ಪೂರ್ವಭಾವಿ ಸಭೆಯನ್ನು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಈಚೆಗೆ ಆಯೋಜಿಸಲಾಗಿತ್ತು.
ಐಕಳ ಹರೀಶ್ ಶೆಟ್ಟಿ ಅವರು ಅಪೂರ್ವ ಸಂಘಟಕರಾಗಿ, ಜನಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜೀವನ ಸಾಧನೆ ಮಾದರಿಯಾಗಿದ್ದು, ಮುಂಬೈ ತುಳು ಕನ್ನಡಿಗರ ಕಣ್ಮಣಿಯಾಗಿರುವ ಐಕಳ ಅವರ ಸಾಧನೆಯನ್ನು ಸಮಗ್ರವಾಗಿ ದಾಖಲಿಸುವ ದೃಷ್ಟಿಯಿಂದ ‘ಸಾರ್ವಭೌಮ’ ಗೌರವ ಗ್ರಂಥವೊಂದನ್ನು ಅರ್ಪಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಕಳ ಹರೀಶ್ ಶೆಟ್ಟಿ ಮಾತನಾಡಿ, ‘ನನಗಾಗಿ ಏನನ್ನೂ ಯಾರಿಂದಲೂ ಬಯಸಿದವನಲ್ಲ. ಸಮಾಜದಲ್ಲಿನ ಬಡವರ, ನೊಂದವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಲ್ಲರನ್ನೂ ಪ್ರೀತಿ– ವಿಶ್ವಾಸದಿಂದ ನೋಡಿಕೊಳ್ಳುವುದು ಆದ್ಯತೆಯಾಗಬೇಕು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇವೆ. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮೂಲಕ ಈ ಗೌರವ ಗ್ರಂಥ ಸಮರ್ಪಣೆ ಆಗುತ್ತಿರುವುದು ನನ್ನ ಪಾಲಿಗೆ ಬಹುದೊಡ್ಡ ಗೌರವ ಎಂದು ಭಾವಿಸಿದ್ದೇನೆ’ ಎಂದರು.
ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಈ ಗ್ರಂಥದ ಪ್ರಧಾನ ಸಂಪಾದಕರಾಗಿ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಹಾಗೂ ಸಹ ಪ್ರಾಧ್ಯಾಪಕ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಗ್ರಂಥದ ಸಂಪಾದಕರಾಗಿ ಕೆಲಸ ಮಾಡಲಿದ್ದಾರೆ. ಸಂಪಾದಕ ಮಂಡಳಿಯಲ್ಲಿ ಬಂಟರವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಅಶೋಕ ಪಕ್ಕಳ, ಸಂಪಾದಕ ಪ್ರೇಮನಾಥ ಮುಂಡ್ಕೂರು, ಸಂಘಟಕ ಕರ್ನೂರು ಮೋಹನ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಪತ್ರಕರ್ತ ದಿನೇಶ್ ಕುಲಾಲ್ ಕೆಲಸ ಮಾಡಲಿದ್ದಾರೆ.
ಸಲಹಾ ಮಂಡಳಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ, ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲು ಕಾರ್ಯನಿರ್ವಹಿಸಲಿದ್ದಾರೆ.
ಡಾ.ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಳ್ತೂರು ಮೋಹನದಾಸ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.