ಮಂಗಳೂರು: ‘ಯುನಿವೆಫ್ ಕರ್ನಾಟಕ ಸಂಘಟನೆಯು 2022ರ ಅ. 21ರಿಂದ ಹಮ್ಮಿಕೊಂಡಿರುವ ‘ಅರಿಯಿರಿ, ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಇದೇ 6ರಂದು ಸಂಜೆ 6.45ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ’ ಎಂದು ಸಂಘಟನೆಯ ಅಧ್ಯಕ್ಷ ರಫಿಯುದ್ದೀನ್ ಕುದ್ರೋಳಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್, ಮಂಗಳೂರು ಧರ್ಮಪ್ರಾಂತ್ರ್ಯದ ಬಿಷಪ್ ರೆ.ಫಾ.ಪೀಟರ್ ಪಾವ್ಲ್ ಸಲ್ದಾನ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು
‘77 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ವಕೀಲರ ಜೊತೆ ಹಾಗೂ ಶಿಕ್ಷಕರ ಜೊತೆ ಸಮಾಲೋಚನೆ ನಡೆಸುವ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೆವು. ವಾಹನ ಜಾಥಾವು 4 ಸಾವಿರ ಕಿ.ಮೀ ಸಂಚರಿಸಿದೆ. ಎಲ್ಲರಿಗೂ ಸಲ್ಲುವ ಪ್ರವಾದಿಯವರ ನಿಂದನೆ ನಡೆದಾಗ ವಾಸ್ತವವನ್ನು ತಿಳಿಸು ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಂಡಿದ್ದೇವೆ. ಎಲ್ಲ ಧರ್ಮದವರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ’ ಎಂದರು.
ಮುಸ್ಲಿಂ ಧರ್ಮದ ವಿರುದ್ಧ ದ್ವೇಷ ಬಿತ್ತುವವರನ್ನೂ ಸಂಪರ್ಕಿಸಿ ಮನಪರಿವರ್ತನೆಗೆ ಯತ್ನಿಸಿದ್ದೀರಾ ಎಂಬ ಪ್ರಶ್ನೆಗೆ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವರು ರಾಜಕೀಯ ಹಿತಾಸಕ್ತಿಯಿಂದ ಉದ್ದೇಶಪೂರ್ವಕವಾಗಿ ಧಾರ್ಮಿಕ ವಿಷಬೀಜ ಬಿತ್ತಿ ಮನಸುಗಳನ್ನು ಮಲಿನಗೊಳಿಸುತ್ತಿದ್ದಾರೆ. ಅಂತಹವರಿಗೆ ಪ್ರವಾದಿಯವರ ಚಿಂತನೆಗಳನ್ನು ತಿಳಿಸುವ ಅಗತ್ಯ ಕಾಣಿಸುತ್ತಿಲ್ಲ’ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಹ ಸಂಚಾಲಕರಾದ ಉಬೇದುಲ್ಲಾ ಬಂಟ್ವಾಳ, ಆಸಿಫ್ ಕುದ್ರೋಳಿ, ಹನೀಫ್ ಮಂಗಳೂರು, ಅಬ್ದುಲ್ ರಶೀದ್ ಬಂದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.