ಮಂಗಳೂರು: ತುಳುನಾಡು ಬಹುಸಾಧಕರು, ಮಹಾನುಭಾವರು, ಸಾಂಸ್ಕೃತಿಕ ಗಾಂಭೀರ್ಯ, ಸಾಹಿತ್ಯದ ಮಾಧುರ್ಯ, ಸಂಯಮಶೀಲತೆ ಹಾಗೂ ಸಹಬಾಳ್ವೆಗೆ ಹೆಸರಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ವಿಶ್ವವಿದ್ಯಾಲಯ ಕಾಲೇಜಿ ಕನ್ನಡ ಸಂಘ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಆಶ್ರಯದಲ್ಲಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ನಡೆದ ‘ಆಟಿಡೊಂಜಿ ದಿನ’ ಉದ್ಘಾಟಿಸಿ ಅವರು ಮಾತನಾಡಿದರು. ಬದುಕು ಎಂದರೆ ಸಾಹಿತ್ಯ. ಸಾಹಿತ್ಯ- ಸಂಸ್ಕೃತಿಯ ಕರುಳಬಳ್ಳಿ ಜಾನಪದ ಸಾಹಿತ್ಯ ಎಂದರು.
ವಾಗ್ಮಿ ಡಾ. ಅರುಣ್ ಉಳ್ಳಾಲ್ ಮಾತನಾಡಿ, ‘ಕರಾವಳಿಯ ಸಾಮಾಜಿಕ- ಧಾರ್ಮಿಕ ಆಚರಣೆ, ಸಂಸ್ಕೃತಿಯಲ್ಲಿ ಆಟಿ ಒಂದು ಪ್ರಮುಖ ಭಾಗ. ಇದು ಬದುಕಿನ ಪದ್ಧತಿಯ ಸಂಕೇತವಾಗಿ, ಮಾನಸಿಕ ಸ್ಥೈರ್ಯ ತುಂಬುತ್ತದೆ’ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು.
ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆವಾದನದ ಮೆರವಣಿಗೆ ಮೂಲಕಅತಿಥಿಗಳನ್ನು ಸ್ವಾಗತಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಅರುಣ್ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ಬೈಲ್, ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸಮಾಜ ಸೇವಕ ಅಡ್ವಕೇಟ್ ಆಸ್ಗರ್ ಉಪಸ್ಥಿತರಿದ್ದರು.
ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾಧವ ಎಂ.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ವೀಕ್ಷಿತಾ ನಿರೂಪಿಸಿದರು. ವಿದ್ಯಾರ್ಥಿನಿ ಅಕ್ಷತಾ ವಂದಿಸಿದರು.ವಿದ್ಯಾರ್ಥಿ ಲತೇಶ್ ಸಾಂತಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.