ಮೂಲ್ಕಿ: ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ಬಸವ ಕೃಷ್ಣ (18) ತೀವ್ರ ಅಸ್ವಸ್ಥಗೊಂಡು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದೆ.
ದೇವಳದ ಜಾತ್ರಾ ಮಹೋತ್ಸವದ ಸಹಿತ ಬಲಿ ಉತ್ಸವಗಳಲ್ಲಿ ಪರಂಪರೆಯಂತೆ ಭಾಗವಹಿಸುತ್ತಿತ್ತು. ಎಂಟು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಸ್ಥಳೀಯ ಪಶು ವೈದ್ಯ ಡಾ.ಪ್ರಸನ್ನ ಅವರಿಂದ ಚಿಕಿತ್ಸೆ ನೀಡಲಾಗಿತ್ತು. ವಾರ ಕಳೆದರೂ ಸಮಸ್ಯೆ ಪರಿಹಾರವಾಗದೆ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ಜಿ.ಕೆ.ಭಟ್ ಮತ್ತು ಡಾ.ಮೃದುಲಾ ಪರಿಶೀಲಿಸಿ ಚಿಕಿತ್ಸೆ ನೀಡಿದರು. ದೇಹದಿಂದ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆಯಲಾಗಿತ್ತು. ಬಳಿಕ ಬಸವ ಆಹಾರ ಸೇವಿಸಲು ಆರಂಭಿಸಿತ್ತು.
ಸೋಮವಾರ ರಾತ್ರಿ ಬಪ್ಪನಾಡಿಗೆ ಕರೆತಂದು ಚಿಕಿತ್ಸೆ ಹಾಗೂ ಆಹಾರ ನೀಡಲಾಗುತ್ತಿತ್ತು. ಮಂಗಳವಾರ ಬೆಳಿಗ್ಗೆ ಪಶುಪಾಲಕ ತಾರಾನಾಥ್ ಬಸವನ್ನು ಪರಿಶೀಲಿಸಿದಾಗ ಮೃತಪಟ್ಟಿತ್ತು.
ದೇವಸ್ಥಾನದ ಮುಂಭಾಗ ದಫನ ಮಾಡಲಾಯಿತು. 12 ವರ್ಷದ ಹಿಂದೆ ಭಕ್ತರೊಬ್ಬರು ಬಸವನನ್ನು ದಾನವಾಗಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.