ಮಂಗಳೂರು: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದ ಹಣ ವಸೂಲಿ ಮಾಡುವ ಮೂಲಕ ರಾಜ್ಯ ಸರ್ಕಾರ ಹಗಲು ದರೋಡೆಗೆ ಇಳಿದಿದೆ ಎಂದು ಆರೋಪಿಸಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ (ಕುಲಶೇಖರ ಉಪವಿಭಾಗ) ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು ನಮ್ಮ ವಿರೋಧವಿಲ್ಲ, ಖಂಡಿತವಾಗಿಯೂ ಅವರಿಗೆ ನೀಡಲೇಬೇಕು. ಅದು ರಾಜ್ಯ ಸರ್ಕಾರದ ಜವಾಬ್ದಾರಿಯೇ ಹೊರತು ಜನರದ್ದಲ್ಲ. ಸರ್ಕಾರ ತನ್ನ ಮೇಲಿನ ಹೊಣೆಯನ್ನು ಗ್ರಾಹಕರ ಮೇಲೆ ಹೊರಿಸಿದ್ದರಿಂದ ಸಹಜವಾಗಿ ಜನರು ಆಕ್ರೋಶಗೊಂಡಿದ್ದಾರೆ. ಯುನಿಟ್ಗೆ 36 ಪೈಸೆ ಹೆಚ್ಚಳದಂತೆ ಪ್ರತಿ ಮನೆಯಿಂದ ಹಣ ದೋಚುವ ಹುನ್ನಾರ ನಡೆದಿದೆ ಎಂದರು.
ಈಗಾಗಲೇ ವಿದ್ಯುತ್ ದರ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಜನರು ತಿರುಗಿ ಬಿದ್ದರೆ ಮಾತ್ರ ಸರ್ಕಾರಕ್ಕೆ ಬುದ್ಧಿ ಬರುವುದಾದರೆ ಜನತೆಯೇ ಪಾಠ ಕಲಿಸಲು ಸಿದ್ಧವಾಗಬೇಕು. ಜನಪರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ ಎಂದರು.
ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ, ವಸಂತ ಪೂಜಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.