ADVERTISEMENT

ಉಪ್ಪಿನಂಗಡಿ: ಬಿಳಿಯೂರು ಅಣೆಕಟ್ಟೆ ಗೇಟ್‌ ತೆರವಿಗೆ ತಡೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 11:58 IST
Last Updated 27 ಮೇ 2025, 11:58 IST
ಉಪ್ಪಿನಂಗಡಿ ಸಮೀಪ ಬಿಳಿಯೂರು ಅಣೆಕಟ್ಟೆಯಲ್ಲಿ ನೀರು ತುಂಬಿದ್ದು, ಗೇಟು ತೆರವು ಮಾಡಲು ತೊಡಕಾಗಿದೆ
ಉಪ್ಪಿನಂಗಡಿ ಸಮೀಪ ಬಿಳಿಯೂರು ಅಣೆಕಟ್ಟೆಯಲ್ಲಿ ನೀರು ತುಂಬಿದ್ದು, ಗೇಟು ತೆರವು ಮಾಡಲು ತೊಡಕಾಗಿದೆ   

ಉಪ್ಪಿನಂಗಡಿ: ನಿರಂತರ ಮಳೆ, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಿರುವ ಅಣೆಕಟ್ಟೆಯ ಎಲ್ಲ ಗೇಟ್ ತೆರವಿಗೆ ತೊಡಕಾಗಿದೆ.

ಮೇ ಅಂತ್ಯದವರೆಗೆ ಅಣೆಕಟ್ಟೆಗಳಲ್ಲಿ ಹಿನ್ನೀರು ಉಳಿಸಿಕೊಳ್ಳುವುದು ನಿಯಮವಾಗಿದ್ದರೂ ಈ ಬಾರಿ ಅವಧಿಗಿಂತ ಮೊದಲೇ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದರಿಂದ ಮೇ 21ರಿಂದ ಗೇಟ್‌ ತೆರವು ಕಾಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ, ಆ ವೇಳೆ ಚಂಡಮಾರುತದಿಂದ ಭಾರಿ ಮಳೆಯಾಗಿದ್ದರಿಂದ ನೇತ್ರಾವತಿ ನದಿ ಮೈ ತುಂಬಿ ಹರಿಯುವಂತಾಗಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಗೇಟ್‌ ತೆರವು ಅಸಾಧ್ಯವಾಗಿದ್ದು, ನದಿಯಲ್ಲಿ ನೀರಿನ ಪ್ರವಾಹದ ಒತ್ತಡವನ್ನು ಎದುರಿಸಿ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಭಾರಿ ಪ್ರಮಾಣದ ಕಸಕಡ್ಡಿ, ಮರದ ದಿಮ್ಮಿ ನದಿ ನೀರಿನೊಂದಿಗೆ ಹರಿದು ಬರುತ್ತಿದ್ದು, ಬಿಳಿಯೂರು ಅಣೆಕಟ್ಟೆಯ ಗೇಟ್‌ಗಳಲ್ಲಿ ಸಿಲುಕಿಕೊಂಡಿದೆ. ಇದೇ ರೀತಿ ಮಳೆ ಸುರಿದರೆ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ನೆರೆ ಬಾಧಿಸುವ ಸಾಧ್ಯತೆ ಅಧಿಕವಾಗಿದೆ ಎಂಬ ಆತಂಕ ಸ್ಥಳೀಯರಲ್ಲಿದೆ.

ADVERTISEMENT

15 ಗೇಟ್‌ ತೆರವು: ಸಹಾಯಕ ಎಂಜಿನಿಯರ್

ನೇತ್ರಾವತಿ ನದಿಯಲ್ಲಿನ ಕೆಳ ಭಾಗದ ಅಣೆಕಟ್ಟೆಗಳ ಗೇಟ್‌ ತೆರವುಗೊಳಿಸದೆ ಬಿಳಿಯೂರು ಅಣೆಕಟ್ಟೆಯ ಗೇಟ್‌ ತೆರವು ನಡೆಸುವುದು ಅಸಾಧ್ಯವಾಗಿತ್ತು. ಈ ಮಧ್ಯೆ ಮೇ ತಿಂಗಳ ನಾಲ್ಕನೇ ವಾರದಲ್ಲಿ ಬಿಳಿಯೂರು ಅಣೆಕಟ್ಟೆಯ ಗೇಟ್‌ ತೆರವಿಗೆ ಮುಂದಾಗುವಷ್ಟರಲ್ಲಿ ಭಾರಿ ಮಳೆ ಆರಂಭವಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಆದರೂ 42 ಗೇಟುಗಳ ಪೈಕಿ 15 ಗೇಟ್‌ ತೆರವುಗೊಳಿಸುವ ಪ್ರಕ್ರಿಯೆ ನಡೆದಿದ್ದು, 9 ಗೇಟ್‌ಗಳನ್ನು ಪೂರ್ಣವಾಗಿ ತೆರವು ಮಾಡಲಾಗಿದೆ. ಉಳಿದ ಗೇಟ್‌ಗಳನ್ನು ನೀರಿನ ಪ್ರವಾಹದ ವೇಗ ಕಡಿಮೆ ಆದ ತಕ್ಷಣ ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಪ್ರಸನ್ನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.