ADVERTISEMENT

ಬಾಲಕನ ಅಂಗಾಂಗ ದಾನ: ಐವರಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:54 IST
Last Updated 15 ಸೆಪ್ಟೆಂಬರ್ 2022, 4:54 IST
ಯಶ್‌ರಾಜ್‌
ಯಶ್‌ರಾಜ್‌   

ಮಂಗಳೂರು: ಅಪಘಾತದಿಂದ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ ಉಳ್ಳಾಲದ ಬಾಲಕನ ಅಗಾಂಗಗಳನ್ನು ಪೋಷಕರು ದಾನ ಮಾಡಿದ್ದು ಇದರಿಂದ ಇತರ ಐವರಿಗೆ ಹೊಸ ಜೀವನ ಲಭಿಸುವಂತಾಗಿದೆ.

ಉಳ್ಳಾಲದ 16 ವರ್ಷದ ಯಶ್‌ರಾಜ್‌ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆತನನ್ನು ನಗರದ ಇಂಡಿಯಾನ ಆಸ್ಪತ್ರೆಗೆ ಸೆ. 7ರಂದು ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕವೂ ಗಾಯಾಳು ಚೇತರಿಸಿಕೊಂಡಿರಲಿಲ್ಲ. ವೈದ್ಯರ ತಂಡವು ಆತನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಮಂಗಳವಾರ ಘೋಷಿಸಿತ್ತು.

ಬಾಲಕನ ತಂದೆ ಉಳ್ಳಾಲದ ತ್ಯಾಗರಾಜ್‌ ಹಾಗೂ ತಾಯಿ ಮಮತಾ ಅವರು ಮಗನ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ‘ಜೀವನ ಸಾರ್ಥಕತೆ’ ಕಾರ್ಯಕ್ರಮದ ಶಿಷ್ಟಾಚಾರದ ಪ್ರಕಾರ ಬಾಲಕನ ಪಿತ್ತಜನಕಾಂಗವನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ಮಣಿಪಾಲ ಆಸ್ಪತ್ರೆಗೆ, ಕಣ್ಣಿನ ಕಾರ್ನಿಯಾಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮೂತ್ರ ಜನಕಾಂಗವನ್ನು ಇಂಡಿಯಾನ ಆಸ್ಪತ್ರೆಯ ರೋಗಿಯೊಬ್ಬರಿಗೆ ಕಸಿ ಮಾಡುವ ಸಲುವಾಗಿ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ADVERTISEMENT

ಪಿತ್ತ ಜನಕಾಂಗವನ್ನು ದೇಹದಿಂದ ಹೊರಗೆ ತೆಗೆದ ಬಳಿಕ ಕೆಲವೇ ತಾಸುಗಳ ಒಳಗೆ ಬೇರೆಯವರಿಗೆ ಕಸಿ ಮಾಡಬೇಕಾಗುತ್ತದೆ. ಹಾಗಾಗಿ ಬೆಂಗಳೂರಿಗೆ ಈ ಅಂಗವನ್ನು ತುರ್ತಾಗಿ ರವಾನಿಸುವುದು ಸವಾಲಿನ ವಿಷಯವಾಗಿತ್ತು. ಇಂಡಿಯಾನ ಆಸ್ಪತ್ರೆಯಿಂದ ಬಜ್ಪೆ ವಿಮಾನನಿಲ್ದಾಣದವರೆಗೆ ‘ಝೀರೋ ಟ್ರಾಫಿಕ್‌’ ವ್ಯವಸ್ಥೆ ಮಾಡುವ ಮೂಲಕ ಅಂಗವನ್ನು ರವಾನಿಸಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.