ಮಂಗಳೂರು: ಧರ್ಮಸ್ಥಳದ ಲಕ್ಷ ದೀಪೋತ್ಸವದ ವೇಳೆ ವೈರಲ್ ಆಗಿದ್ದ ‘ಬಂಡಿ ಕಾರು’ ಈಗ ಮತ್ತೊಮ್ಮೆ ಸದ್ದು ಮಾಡಿದೆ. ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರ ಅವರು ಈ ಬಂಡಿ ಕಾರಿನ ಬಗ್ಗೆ ವಿಡಿಯೊ ಸಹಿತ ಟ್ವೀಟ್ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಕಾರಿನ ಹಿಂಭಾಗದ ರಚನೆಯೊಂದಿಗೆ ಮುಂದೆ ಎರಡು ಎತ್ತುಗಳನ್ನು ಕಟ್ಟಿರುವ ಬಂಡಿ ಇದೆ. ಎತ್ತಿನ ಬಂಡಿಗಿಂತ ಭಿನ್ನವಾಗಿರುವ ಇದರಲ್ಲಿ ರೈತನೊಬ್ಬ ಕುಳಿತು ಅದನ್ನು ಚಲಾಯಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ ಅವರು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾದ ಸಿಇಒ ಅವರನ್ನು ಹಾಸ್ಯಮಿಶ್ರಿತ ಧಾಟಿಯಲ್ಲಿ ರಚನಾತ್ಮಕವಾಗಿ ಪ್ರಶ್ನಿಸಿದ್ದಾರೆ.
‘ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನ್ನಿಸುತ್ತಿಲ್ಲ. ನವೀಕರಿಸಬಹುದಾದ ಇಂಧನ ಹೊಂದಿರುವ ಕಾರು ಇದು. ಮಿಥೇನ್ ಗ್ಯಾಸ್ ಅನ್ನು ಪರಿಗಣಿಸುವುದಾದರೆ, ಇದರ ಹೊಗೆ ಉಗುಳುವಿಕೆ ನನಗೆ ಖಚಿತವಾಗಿಲ್ಲ’ ಎಂದು ವಿಡಿಯೊ ಜೊತೆ ಟ್ವೀಟ್ ಮಾಡಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪರಿಕಲ್ಪನೆಯಲ್ಲಿ ಈ ಕಾರಿನ ಮಾದರಿಯ ಎತ್ತಿನ ಬಂಡಿ ರೂಪುಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.