ಮಂಗಳೂರು: ಪಾಕಿಸ್ತಾನದೊಂದಿಗಿನ ಸಂಘರ್ಷದ ಬೆನ್ನಲ್ಲೇ, ಭಯೋತ್ಪಾದನೆ ಕುರಿತ ತನ್ನ ನಿಲುವನ್ನು ಜಾಗತಿಕ ಸಮುದಾಯಕ್ಕೆ ವಿವರಿಸಲು ರಚಿಸಲಾದ ಸರ್ವಪಕ್ಷಗಳ ಸದಸ್ಯರ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ಥಾನಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾ.ಚೌಟ, ‘ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕಿರುವ ಈ ಪ್ರಪ್ರಥಮ ಅವಕಾಶವು ನನ್ನ ಪಾಲಿಗೆ ಶ್ರೇಷ್ಠವಾದುದು. ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡ ರೀತಿಯ ಬಗ್ಗೆ ಒಬ್ಬ ಯೋಧನಾಗಿ ನನಗೆ ಅಪಾರ ಹೆಮ್ಮೆಯಿದೆ. ಈ ಎಲ್ಲದರ ಹಿಂದಿನ ಶಕ್ತಿಯಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಮತ್ತು ಧ್ಯೇಯದ ಧ್ವನಿಯಾಗಲು ಈ ನಿಯೋಗದ ಭಾಗವಾಗಿ ಅವಕಾಶ ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ-ಸಹಿಷ್ಣುತೆಯ ಸಂದೇಶ ಸಾರಲು ಮತ್ತು ನವಭಾರತವು ಯಾವ ರೀತಿ ಭಿನ್ನವಾಗಿದೆ ಹಾಗೂ ತನ್ನ ನಿಲುವಿಗೆ ಹೇಗೆ ಬದ್ಧವಾಗಿದೆ ಎಂಬುದನ್ನು ಜಗತ್ತಿಗೆ ಹಂಚಿಕೊಳ್ಳಲು ನಾನು ಈ ವೇದಿಕೆಯನ್ನು ಬಳಸಿಕೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.
ಕ್ಯಾ.ಚೌಟ ಅವರು ಸದಸ್ಯರಾಗಿರುವ ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಎಂಟು ಮಂದಿ ಸಂಸದರ ನಿಯೋಗವು ರಷ್ಯಾ, ಸ್ಪೇನ್, ಗ್ರೀಸ್, ಸ್ಲೋವೇನಿಯಾ, ಲಾಟ್ವಿಯಾ ದೇಶಗಳಿಗೆ ಭೇಟಿ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.