ADVERTISEMENT

ಚಾಮರಾಜನಗರ ಘಟನೆ: ಸರ್ಕಾರದ ವೈಫಲ್ಯ ಎಂದು ಸಂಘಟನೆಗಳು ಖಂಡನೆ

ಆಮ್ಲಜನಕ ಸಿಗದೆ ರೋಗಿಗಳ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:32 IST
Last Updated 4 ಮೇ 2021, 3:32 IST
ಹರೀಶ್ ಕುಮಾರ್
ಹರೀಶ್ ಕುಮಾರ್   

ಮಂಗಳೂರು: ಕೋವಿಡ್-19 ನಿಯಂತ್ರಿ ಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವೈಫಲ್ಯವಾಗಿದ್ದು, ಚಾಮರಾಜದಲ್ಲಿ ಆಮ್ಲಜನಕ ಇಲ್ಲದೆ 24ಮಂದಿ ರೋಗಿ ಗಳು ಸಾವನ್ನಪ್ಪಿರುವುದು ಇದಕ್ಕೆ ಕೈಗನ್ನಡಿ. ನಿಜಕ್ಕೂ ಇದೊಂದು ದುರಂತ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್‌ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವು ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಸಮಸ್ಯೆ ಎದುರಾಗಿದೆ. ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲೂ ಬೆಂಗ ಳೂರು, ಚಾಮರಾಜನಗರ ಪರಿಸ್ಥಿತಿ ಬರಬಹುದು. ಜಿಲ್ಲಾಡಳಿತ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮಾಡಬೇಕು. ಜನರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸವನ್ನು ಆಡಳಿತ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಪ್ರಾಯೋಜಿತ ಕೊಲೆ: ಚಾಮ ರಾಜನಗರದಲ್ಲಿ ನಡೆದ ಕೋವಿಡ್ ಸಾವುಗಳು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ ಎಂದು ಪಿಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ADVERTISEMENT

ಹತ್ತಾರು ಜನರ ಸಾವಿಗೆ ಕಾರಣವಾದ ಈ ಭೀಕರ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಸಮಸ್ಯೆ ಬಗ್ಗೆ ಗಂಭೀರ ನಿರ್ಲಕ್ಷ್ಯ ತೋರಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಹಾಗೂ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ಸಂತ್ರಸ್ತರಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಇದ್ದೂ ಇಲ್ಲದಂತೆ: ಚಾಮ ರಾಜನಗರದ ಘಟನೆ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ. ಇಂತಹ ಸಂದರ್ಭ ದಲ್ಲಿ ರಾಜ ಕೀಯ ಮಾಡಬಾರದು. ಆದರೆ ಸರ್ಕಾರದ ವೈಫಲ್ಯದಿಂದಾಗಿ ಇಂತಹ ದುರ್ಘಟನೆಗಳು ಉಂಟಾಗುತ್ತಿವೆ. ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ ತಿಳಿಸಿದ್ದಾರೆ.

ಬಡಜನರ ಆರೋಗ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಅವರಿಗೆ ಪರಿಸ್ಥಿತಿಯ ಅರಿವಿಲ್ಲವೇ? ಬಡರೋಗಿಗಳ ಸಾವಿಗೆ ರಾಜ್ಯ ಸರ್ಕಾರ ಸಂಪೂರ್ಣ ಹೊಣೆ ಹೊತ್ತು ತಕ್ಷಣವೇ ಮೃತ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.