ಉಜಿರೆ: ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಹೆಚ್ಚಿನ ಎಲ್ಲಾ ಕಿಂಡಿಅಣೆಕಟ್ಟುಗಳ ಹಲಗೆಗಳನ್ನು ತೆರವುಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರಾಕೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಸುರಿದ ಜಡಿಮಳೆಯಿಂದಾಗಿ ನದಿ, ತೊರೆಗಳೆಲ್ಲ ತುಂಬಿ ಹರಿಯುತ್ತಿದ್ದು, ಅಪಾಯದ ಸನ್ನಿವೇಶ ಇರುವುದರಿಂದ ಕಿಂಡಿಅಣೆಕಟ್ಟುಗಳ ಹಲಗೆಯನ್ನು ತೆರವುಗೊಳಿಸಲಾಗಿದೆ. ಕೆಲವು ಕಡೆ ತ್ಯಾಜ್ಯ ಸಂಗ್ರಹವಾಗಿ ನೆರೆ ನೀರು ಹೊಲ, ತೋಟಗಳಿಗೆ ನುಗ್ಗಿ ಅಪಾಯದ ಮುನ್ಸೂಚನೆ ದೊರಕಿತ್ತು. ಹಾಗಾಗಿ ಎಲ್ಲಾ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ತೆರವುಗೊಳಿಸಲಾಗಿದೆ. ಅಂತರ್ಜಲ ಮಟ್ಟವೂ ಹೆಚ್ಚಾಗಿದ್ದು, ಈಗ ನದಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
29ರಂದು ವ್ಯಸನಮುಕ್ತ ಭಾರತಕ್ಕಾಗಿ ಮಳೆಗಾಲದ ಓಟ
ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳು, ಹೋಟೆಲ್ ಓಶಿಯನ್ ಪರ್ಲ್, ಬದುಕು ಕಟ್ಟೋಣ ತಂಡ, ಉಜಿರೆ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಜೂನ್ 29 ರಂದು ಭಾನುವಾರ ಬೆಳಿಗ್ಗೆ 7.30ರಿಂದ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ವ್ಯಸನಮುಕ್ತ ಭಾರತಕ್ಕಾಗಿ ಮಳೆಗಾಲದ ಓಟ ಆಯೋಜಿಸಲಾಗಿದೆ.
ಪುರುಷರು ಮತ್ತು ಮಹಿಳೆಯರಿಗಾಗಿ 5 ಕಿ.ಮೀ ಮಳೆಗಾಲದ ಓಟ (ರೈನಥಾನ್) ಏರ್ಪಡಿಸಲಾಗಿದ್ದು, ನೋಂದಣಿ ಶುಲ್ಕ ವಯಸ್ಕರಿಗೆ ₹ 250, ವಿದ್ಯಾರ್ಥಿಗಳಿಗೆ ₹100 ನಿಗದಿಪಡಿಸಲಾಗಿದೆ.
ಪ್ರಥಮ ಬಹುಮಾನ: ₹ 10 ಸಾವಿರ, ದ್ವಿತೀಯ: ₹7 ಸಾವಿರ, ತೃತೀಯ ಬಹುಮಾನ ₹5 ಸಾವಿರ ನಿಗದಿಪಡಿಸಲಾಗಿದೆ. ಹೆಸರು ನೋಂದಾಯಿಸಲು ಜೂನ್ 22ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅನೂಪ್ ಜೈನ್ ಅವರ ಮೊ.95355 33401 ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.