ಪುತ್ತೂರು (ದಕ್ಷಿಣ ಕನ್ನಡ): ‘ಬಿಜೆಪಿ ಮುಖಂಡ ಅರುಣಕುಮಾರ್ ಪುತ್ತಿಲ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ನನಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಆರೋಪಿಸಿರುವ ಸಂತ್ರಸ್ತೆ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಪುತ್ತಿಲ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಅತ್ಯಾಚಾರದ ಕಲಂನ್ನು ಸೇರ್ಪಡೆಗೊಳಿಸಿದ್ದರು.
‘ಅನ್ಯಾಯ ಆಗಿರುವ ಬಗ್ಗೆ ದೂರು ನೀಡಲು ಪುತ್ತೂರು ನಗರ ಠಾಣೆಗೆ ಆಗಸ್ಟ್ 30ರಂದು ಹೋದಾಗ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ದೂರು ಸ್ವೀಕರಿಸದೆ, 3 ದಿನ ಕಾಯಿಸಿದ್ದಾರೆ. ದೂರು ನೀಡಲು ಬಂದ ವಿಚಾರವನ್ನು ಆರೋಪಿಗೆ ತಿಳಿಸಿ, ದೂರು ಸ್ವೀಕರಿಸಲು ನಿರಾಕರಿಸಿದ್ದರು. ಈ ಕಾರಣದಿಂದ ಸೆ. 1ರಂದು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಧರಣಿ ಮಾಡಿದ್ದೆ. ಅಂದು ಸಂಜೆ ನಾನು ನೀಡಿದ ಅತ್ಯಾಚಾರ ದೂರನ್ನು ಬದಲಾಯಿಸಿದ ಪೊಲೀಸರು, ಆರೋಪಿಗೆ ಜಾಮೀನು ದೊರೆಯಲು ಅನುಕೂಲವಾಗುವಂತೆ ಐಪಿಸಿ ಕಲಂ 376ರ ಬದಲು ಕಲಂ 354(ಎ) ಅಡಿ ದೂರು ದಾಖಲಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ದೂರು ನೀಡದಂತೆ ಹಾಗೂ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ನನಗೆ ಆತನ ಕಡೆಯವರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಪುತ್ತೂರು ನಗರ ಠಾಣೆ ಮತ್ತು ಮಹಿಳಾ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆತನೊಂದಿಗೆ ಶಾಮೀಲಾಗಿ ನನಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನನಗೆ ನ್ಯಾಯ ಒದಗಿಸಬೇಕು’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತಿಲ ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ಸೆ. 2ರಂದು ಪುತ್ತೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿದ್ದರು. ಬಳಿಕ ಪೊಲೀಸರು ಆಕೆಯನ್ನು ಬೆಂಗಳೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಬಳಿಕ ಪೊಲೀಸರು ಅರುಣ್ಕುಮಾರ್ ಪುತ್ತಿಲ ವಿರುದ್ಧ ಅತ್ಯಾಚಾರ (ಐಪಿಸಿ ಸೆಕ್ಷನ್ 376) ಆರೋಪವನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಕೃತ್ಯ ನಡೆದಿರುವುದು ಬೆಂಗಳೂರು ವ್ಯಾಪ್ತಿಯಲ್ಲಿ ಆಗಿರುವುದರಿಂದ ಪುತ್ತೂರು ನ್ಯಾಯಾಲಯದಿಂದ ಬೆಂಗಳೂರು ನ್ಯಾಯಾಲಯದ ಸುಪರ್ದಿಗೆ ಈ ಪ್ರಕರಣವನ್ನು ವರ್ಗಾಯಿಸುವಂತೆಯೂ ಪೊಲೀಸರು ಕೋರಿಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.