ಮೂಡುಬಿದಿರೆ: ಇಲ್ಲಿ ಭಾನುವಾರ ನಡೆದ ಅಖಿಲ ಭಾರತ ಅಂತರವಿಶ್ವವಿದ್ಯಾಲಯ ಪುರುಷರ ಕ್ರಾಸ್ಕಂಟ್ರಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿದೆ.
ಐದನೇ ಬಾರಿಗೆ ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ಷಿಪ್ ಪದಕ ತನ್ನದಾಗಿಸಿಕೊಂಡಿದೆ. ಭಾನುವಾರ ಬೆಳಿಗ್ಗೆ 7 ಗಂಟೆಗೆ ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ಬಳಿಯಿಂದ 10 ಕಿ.ಮೀ. ಸ್ಪರ್ಧೆ ಆರಂಭಗೊಂಡು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ, ಮಹಾವೀರ ಕಾಲೇಜು, ಜೈನ್ ಕಾಲೇಜು, ಅಲಂಗಾರ್ ಮಾರ್ಗವಾಗಿ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಸಮಾಪನಗೊಂಡಿತು.
ಮಂಗಳೂರು ವಿಶ್ವವಿದ್ಯಾಲಯ 30 ಅಂಕಗಳೊಂದಿಗೆ ಪ್ರಥಮ ಸ್ಥಾನ, ಪಂಜಾಬಿ ವಿಶ್ವವಿದ್ಯಾಲಯ ಪಟಿಯಾಲ 53 ಅಂಕಗಳೊಂದಿಗೆ ದ್ವಿತೀಯ ಹಾಗೂ ಸಾವಿತ್ರಿಬಾಯಿಫುಲೆ ಪುಣೆ ವಿಶ್ವವಿದ್ಯಾಲಯ 62 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು.
ನಗದು ಬಹುಮಾನ: ಚಾಂಪಿಯನ್ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ₹50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ವೈಯುಕ್ತಿಕ ಚಾಂಪಿಯನ್ಷಿಪ್ನಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರು ವಿವಿಯ ನರೇಂದ್ರ ಪ್ರತಾಪ್ (31.52 ನಿಮಿಷ)ಗೆ ₹25 ಸಾವಿರ, ದ್ವಿತೀಯ ಸ್ಥಾನ ಪಡೆದ ಪಂಜಾಬ್ ವಿಶ್ವವಿದ್ಯಾಲಯ ಪಟಿಯಾಲದ ಪಿಂಟು ಕುಮಾರ್ ಯಾದವ್(32.13 ನಿ)ಗೆ ₹20 ಸಾವಿರ, ತೃತೀಯ ಸ್ಥಾನದ ಮದ್ರಾಸ್ ವಿಶ್ವವಿದ್ಯಾಲಯದ ಸತೀಶ್ ಕುಮಾರ್ ಎಸ್.ಎಚ್.(32.22 ನಿ)ಗೆ ₹15 ಸಾವಿರ, ನಾಲ್ಕನೇ ಸ್ಥಾನ ಪಡೆದ ಮಂಗಳೂರು ವಿಶ್ವವಿದ್ಯಾಲಯದ ಅಬ್ದುಲ್ ಬಾರಿ(32.30 ನಿ.)ಗೆ 10 ಸಾವಿರ, ಐದನೇ ಸ್ಥಾನ ಪಡೆದ ಕುಮಾನ್ ವಿಶ್ವವಿದ್ಯಾಲಯದ ನೈನಿತಾಲ್ನ ಮೋಹನ್ ಸೈನಿ(32.49 ನಿ.)ಗೆ ₹5 ಸಾವಿರ, ಆರನೇ ಸ್ಥಾನ ಪಡೆದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ರೋಹಿತ್ ಯಾದವ್(32.58)ಗೆ ₹5 ಸಾವಿರ ನಗದು ಬಹುಮಾನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.