ADVERTISEMENT

ದೇರಳಕಟ್ಟೆಆಸ್ಪತ್ರೆ ಬಳಿ ಉದ್ರಿಕ್ತರಿಂದ ಪ್ರತಿಭಟನೆ

ಯೆನೆಪೋಯ ಆಸ್ಪತ್ರೆಗೆ ಅಬ್ದುಲ್ ರಹೀಂ ಮೃತದೇಹ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 4:03 IST
Last Updated 28 ಮೇ 2025, 4:03 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಉಳ್ಳಾಲ: ಬಂಟ್ವಾಳ ಗ್ರಾಮಾಂತರ ಠಾಣೆಯ ವ್ಯಾಪ್ತಿ ಇರಾಕೋಡಿ ಎಂಬಲ್ಲಿ ಹತ್ಯೆಯಾದ ಅಬ್ದುಲ್ ರಹೀಂ ಮೃತದೇಹವನ್ನು ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ ತರಲಾಗಿದ್ದು, ಆಸ್ಪತ್ರೆಯ ಬಳಿ ಯುವಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.  ಕೆಲವು ಉದ್ರಿಕ್ತ ಜನರು ಕೆಲಕಾಲ ಇಲ್ಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. 

ಕಮಿಷನರ್‌ ತರಾಟೆಗೆ: ನಗರ ಪೊಲೀಸ್‌ ಕಮಿಷನರ್ ಅನುಪಮ್ ಅಗ್ರವಾಲ್ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸ್ಥಳದಲ್ಲಿ ಜಮಾಯಿಸಿದ್ದವರು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಬಜಪೆಯಲ್ಲಿ  ಭಾನುವಾರ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದವರು ಅನುಮತಿ ಪಡೆಯದೆಯೇ ಪ್ರತಿಭಟನಾ ಸಭೆ ನಡೆಸಲು ಅವಕಾಶ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.

ಆಸ್ಪತ್ರೆ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಂತೆಯೇ ಸ್ತಳದಲ್ಲಿ ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ:

ಹತ್ಯೆ ಕುರಿತು ಪ್ರತಿಕ್ರಿಯಿಸಿದ  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ‘ಕೊಲೆಗೆ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಆರಂಭಿಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದೇವೆ. ಕೆಲವು ಶಂಕಿತರನ್ನು ಕರೆದು ವಿಚಾರಣೆಯನ್ನು ಮಾಡುತ್ತಿದ್ದೇವೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ವದಂತಿಗೆ ಕಿವಿಗೊಡದಿರಿ: ‘ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ‌. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ  ಅಬ್ದುಲ್ ಹಮೀದ್‌, ‘ ಜಿಲ್ಲಾ ಉಸ್ತುವಾರಿ ಸಚಿವರು, ಗೃಹಸಚಿವರು ಜಿಲ್ಲೆಗೆ ಬಂದು ಪರಿಸ್ಥಿತಿ ಅವಲೋಕಿಸಬೇಕು. ಬಜಪೆಯಲ್ಲಿ ಮಾತನಾಡಿದ ಶ್ರಿಕಾಂತ್‌ ಶಟ್ಟಿ ಹಾಗೂ ಭರತ್ ಕುಮ್ಡೇಲು ಈ ಕೊಲೆಗೆ ಸೂಚನೆ ಕೊಟ್ಟಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ಮತ್ತೆ ಮತ್ತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಆಗ್ರಹಿಸಿದ್ದೆವು. ಅಮಾಯಕರು ಮನೆಯಿಂದ ಹೊರಬರಲಾಗದ ಸ್ಥಿತಿ ಇದೆ. ಬಹಳ ನೋವಿನಿಂದ ಹೇಳುತ್ತೇನೆ., ದ್ವೇಷ ಹತ್ಯೆ ಇಲ್ಲಿಗೆ ಕೊನೆಯಾಗಬೇಕು. ಪ್ರಚೋದನಾಕಾರಿ ಮಾತನ್ನಾಡುವವರನ್ನು ಹೆಡೆಮುರಿ ಕಟ್ಟಬೇಕು ’ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದತ್, ‘ಸರ್ಕಾರ ಕೋಮು ಹಿಂಸೆ ನಿಗ್ರಹ ದಳ ಮಾಡುತ್ತೇವೆ ಎನ್ನುತ್ತಿದೆ. ಅದಕ್ಕೆ ಮತ್ತೊಂದು ಹೆಣ ಬೀಳಬೇಕಾ’ ಎಂದು ಪ್ರಶ್ನಿಸಿದರು.

‘15 ಮಂದಿ ಬಹಳ ವ್ಯವಸ್ಥಿತವಾಗಿ ಈ ಹತ್ಯೆ ಮಾಡಿದ್ದಾರೆ.  ವಿಶೇಷ ತನಿಖಾ ತಂಡ ರಚಿಸಿ ಈ ಪ್ರಕರಣವನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು. ಕೊಲೆಯ ಹಿಂದಿರುವ ಎಲ್ಲರನ್ನೂ ಹುಡುಕಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕುತ್ತಲೇ ಇದ್ದಾರೆ. ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಎಂದು ಹೇಳಿದ್ದಾನೆ. ಇನ್ನೊಬ್ಬ ಗೂಂಡಾ ಪೋಸ್ಟ್ ಮಾರ್ಟಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇವೆ ಎಂದಿದ್ದಾನೆ.  ಶ್ರೀಕಾಂತ್ ಶೆಟ್ಟಿ ಹೇಳಿಕೆ ಕೊಟ್ಟಿದ್ದ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಎಫ್‌ಐಆರ್ ದಾಖಲಿಸಿದ್ದು ಬಿಟ್ಟರೆ ಕ್ರಮ ಆಗಿಲ್ಲ. ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ದ ಎಫ್ಐಆರ್ ದಖಲಾಗಿದೆಯೇ ಹೊರತು, ಒಂದಿಬ್ಬರನ್ನು ಬಿಟ್ಟು ಬೇರೆ ಯಾರನ್ನೂ ಬಂಧಿಸಿಲ್ಲ’ ಎಂದರು.

‘ಸಂಘ ಪರಿವಾರದವರು ಬಹಿರಂಗಹೇಳಿಕೆ ಕೊಟ್ಟರೂ ಕ್ರಮ ಆಗುತ್ತಿಲ್ಲ. ಇಲ್ಲಿನ ಶಾಸಕರೂ ಬಹಿರಂಗ ಹೇಳಿಕೆ ಕೊಡುತ್ತಾ ಇದ್ದಾರೆ’ ಎಂದರು.

‘ಮೃತ ರಹೀಂ ಅಮಾಯಕ ಯುವಕ. ಆತ ಕ್ರಿಮಿನಲ್ ಅಲ್ಲ. ಮಸೀದಿಯೊಂದರಲ್ಲಿ ಕಾರ್ಯದರ್ಶಿ ಆಗಿದ್ದ ಆತ ಯಾವುದೇ ಸಂಘಟನೆಯಲ್ಲಿ  ಇರಲಿಲ್ಲ. ಶ್ರಮಜೀವಿಯಾಗಿದ್ದ. ಆತನ ಮೇಲೆ ಯಾವುದೇ ಮೊಕದ್ದಮೆಗಳಿರಲಿಲ್ಲ. ಆದರೂ ಸಂಘಪರಿವಾರದ ಗೂಂಡಾಗಳು ಅಮಾಯಕನ ಕೊಂದಿದ್ದಾರೆ. ಇವರಿಗೆ ಒಬ್ಬ ಮುಸಲ್ಮಾನನ ರಕ್ತ ಬೇಕು. ಆತ ಯಾವುದೇ ಸಂಘಟನೆಯಲ್ಲಿ ಇರಬೇಕು ಅಂತ ಇಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.