ADVERTISEMENT

ಬಿಜೆಪಿಯಲ್ಲಿ ಅದಕ್ಷರನ್ನು ತೆಗೆಯುವ ಕ್ರಮ: ವೀರಪ್ಪ ಮೊಯಿಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 12:47 IST
Last Updated 25 ಜುಲೈ 2021, 12:47 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಮಂಗಳೂರು: ‘ಆಡಳಿತದಲ್ಲಿ ಅದಕ್ಷತೆ, ಭ್ರಷ್ಟಾಚಾರ ಕಂಡುಬಂದರೆ ಅಂಥವರನ್ನು ತೆಗೆದು ಹಾಕುವ ಕ್ರಮ ಬಿಜೆಪಿಯಲ್ಲಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಎಂ. ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ನಗರದ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಸಚಿವ ಸ್ಥಾನದಿಂದ ಕಳೆಗಿಳಿಸಲಾಯಿತು. ಐಟಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾದ ಹಿನ್ನೆಲೆಯಲ್ಲಿ ಸಚಿವ ರವಿಶಂಕರ್ ಪ್ರಸಾದ್‌ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಉತ್ತರಾಖಂಡದಲ್ಲೂ ಇಂತಹ ನಿದರ್ಶನಗಳಿವೆ. ಆದರೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಬಿಜೆಪಿ ಅದಕ್ಷ ಆಡಳಿತ ನಡೆಸುತ್ತಿದೆ. ಬಿಜೆಪಿ ತನ್ನ ಅಂತ್ಯವನ್ನು ತಾನೇ ಕಾಣಲಿದೆ ಎಂದರು.

ADVERTISEMENT

‘ಸರಳ, ಸಜ್ಜನ ಸ್ವಭಾವದ ಆಸ್ಕರ್ ಫರ್ನಾಂಡಿಸ್ ಸದಾ ಜನಸೇವೆಯಲ್ಲಿ ಇದ್ದವರು. ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾರೆ. ಐದು ದಶಕಗಳಿಂದ ನನಗೆ ಅವರ ಒಡನಾಟವಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ’ ಎಂದು ಮೊಯಿಲಿ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.