ಹೆಬ್ರಿ: ‘ಇತರರಿಗೆ ವಸ್ತು ರೂಪದಲ್ಲಿ ನೀಡುವುದು ಕ್ಷಣಿಕ ಖುಷಿಗೆ ಮಾತ್ರ. ಮನುಷ್ಯ ತನ್ನೆದುರಿನವನಿಗೆ ಪ್ರೀತಿ ತೋರುವ ಮೂಲಕ ಶಾಶ್ವತವಾಗಿ ಸಂತೃಪ್ತಿಪಡಿಸಲು ಸಾಧ್ಯ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ಹೇಳಿದರು.
ಹೆಬ್ರಿ ತಾಲ್ಲೂಕು ಮುದ್ರಾಡಿ ಅಜೆಕಾರು ವಲಯ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಮಹಿಳಾ ಮತ್ತು ಯುವ ವೇದಿಕೆ ಜಂಟಿಯಾಗಿ ಹೆಬ್ರಿಯ ಅವರ ಮನೆಗೆ ತೆರಳಿ ನೀಡಿದ ಗೌರವ ಸ್ವೀಕರಿಸಿ, ಅವರು ಮಾತನಾಡಿದರು.
‘ಮುದ್ರಾಡಿ ಭಕ್ರೆ ಮಠದ ಭದ್ರಕಾಳಿ ದೇವಿಯನ್ನು ಸದಾ ನಂಬಿ ನಡೆಯುತ್ತಿದ್ದೇನೆ. ದೇವಿಯ ಕೃಪೆಯಿಂದಲೇ ಅಂಬಾತನಯ ಕಾವ್ಯನಾಮ ಇಟ್ಟುಕೊಂಡಿದ್ದೇನೆ. ನನ್ನ ತಂದೆ ಸುಮಾರು 25 ವರ್ಷಗಳಿಂದ ಭಕ್ರೆ ಮಠದಲ್ಲಿ ಮಾಡುತ್ತಿದ್ದ ಭಜನೆಯನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ. ದೇವಿಯ ಮುಡಿಯಿಂದ ಹೂ ಕೆಳಗೆ ಬೀಳದೆ ನಾನು ಅಲ್ಲಿಂದ ಕದಲುತ್ತಿರಲಿಲ್ಲ. ದೇವಿ ನನಗೆ ಶ್ರೀರಕ್ಷೆಯಾಗಿದ್ದಾಳೆ’ ಎಂದು ಭಾವುಕರಾದರು.
ಸಂಘದ ಅಧ್ಯಕ್ಷ ಎಸ್. ಟಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಯುವವೇದಿಕೆಯ ಅಧ್ಯಕ್ಷ ಲೋಕೇಶ್ ಕನ್ಯಾನ, ಸಂಘದ ಗೌರವ ಸಲಹೆಗಾರ ಮುದ್ರಾಡಿ ವಿಜಯಕುಮಾರ್ ಉಡುಪಿ, ಕಬ್ಬಿನಾಲೆ ಗೋವಿಂದ ಶೆಟ್ಟಿಗಾರ್, ಮುನಿಯಾಲು ಮಾತಿಬೆಟ್ಟು ಕೃಷ್ಣ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಸುಮಲತಾ ಸಂತೋಷ್, ಕೋಶಾಧ್ಯಕ್ಷ ಸದಾಶಿವ ಶೆಟ್ಟಿಗಾರ್ ಕನ್ಯಾನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.