ADVERTISEMENT

ಗಾಂಧೀಜಿ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗಾಂಧಿ ಜಯಂತಿ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:32 IST
Last Updated 2 ಅಕ್ಟೋಬರ್ 2020, 16:32 IST
ಮಂಗಳೂರಿನ ಪುರಭವನದ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಷ್ಪನಮನ ಸಲ್ಲಿಸಿದರು.
ಮಂಗಳೂರಿನ ಪುರಭವನದ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಷ್ಪನಮನ ಸಲ್ಲಿಸಿದರು.   

ಮಂಗಳೂರು: ಜಿಲ್ಲಾಡಳಿತ ಮತ್ತು ಭಾರತ್ ಸೇವಾದಳದ ಆಶ್ರಯದಲ್ಲಿ ಕೋವಿಡ್–19 ನಿಯಮ ಪಾಲನೆಯೊಂದಿಗೆ ಪುರಭವನದ ಎದುರಿನ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಗಾಂಧಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗಣ್ಯರು ಗಾಂಧಿ ಟೋಪಿ ಧರಿಸಿ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಭಾರತದಲ್ಲಿ ಗಾಂಧೀಜಿಯ ಕನಸಾದ ‘ಸ್ವಚ್ಛ ಭಾರತ’ ಸಾಕಾರಗೊಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014 ರಲ್ಲಿ ಕಾರ್ಯಕ್ರಮ ರೂಪಿಸಿದೆ. ಇದರಿಂದ ಬಯಲು ಶೌಚ ಮುಕ್ತ ವಾತಾವರಣ ಸೃಷ್ಟಿ ಹಾಗೂ ಸ್ವಚ್ಛ ನಗರ, ಹಳ್ಳಿಗಳ ನಿರ್ಮಾಣ ಮಾಡಲಾಗುತ್ತಿದೆ. ಸ್ವಚ್ಛ ಭಾರತ ನನಸಾಗಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ’ ಎಂದು ತಿಳಿಸಿದರು.

ಉಪ ಮೇಯರ್ ವೇದಾವತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಡಿಸಿಪಿ ಅರುಣಾಂಗ್ಷು ಗಿರಿ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಭಾರತ್ ಸೇವಾದಳದ ಕಾರ್ಯದರ್ಶಿ ಟಿ.ಕೆ.ಸುಧೀರ್ ಇದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ್ ಸೇವಾದಳದ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ಮಂಜೇಗೌಡ ನಿರೂಪಿಸಿ, ವಂದಿಸಿದರು.

ADVERTISEMENT

ಜಾಗೃತಿ ಅಭಿಯಾನ

ಪಾಲಿಕೆಯ ವತಿಯಿಂದ ನಗರದ ಲಾಲ್‌ಬಾಗ್ ವೃತ್ತದಲ್ಲಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಮೇಯರ್‌ ದಿವಾಕರ ಪಾಂಡೇಶ್ವರ, ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಬಳ್ಳಾಲಬಾಗ್‌ ಪ್ರದೇಶದ ಮನೆಗಳಿಗೆ ತೆರಳಿ, ತ್ಯಾಜ್ಯ ವಿಂಗಡನೆ ಮಾಡುವ ಕುರಿತು ಕರಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಮನೆಯಿಂದಲೇ ತ್ಯಾಜ್ಯ ವಿಂಗಡನೆ ಮಾಡಿದಲ್ಲಿ, ವಿಲೇವಾರಿ ಮಾಡಲು ಅನುಕೂಲ ಆಗಲಿದೆ. ತ್ಯಾಜ್ಯ ವಿಂಗಡಿಸದೇ ಇರುವವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.