ಮಂಗಳೂರು: ಕೋವಿಡ್–19ನಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಈ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ನಂತಹ ಗ್ಯಾಜೆಟ್ಗಳೇ ಆಧಾರವಾಗಿವೆ. ಗ್ಯಾಜೆಟ್ಗಳಿಂದ ಮಕ್ಕಳನ್ನು ದೂರವಿರಿಸಿ, ಅವರಲ್ಲಿ ಸೃಜನಶೀಲತೆ ಹೆಚ್ಚಿಸಲು ನಗರದ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ.
ಮಕ್ಕಳ ಹಿತದೃಷ್ಟಿಯಿಂದ ಭಾಷಾಭಿವೃದ್ಧಿ, ತಾರ್ಕಿಕ ಚಿಂತನೆ, ಸೃಜನಶೀಲತೆ ಮತ್ತು ಯೋಚಿಸುವ ವಿಧಾನ, ವಿನೋದ ಮತ್ತು ಕಲಿಕೆಯನ್ನು ಸಂಯೋಜಿಸುವ ಸಂವಾದಾತ್ಮಕ ವೇದಿಕೆಯನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಡಾ.ಕೆ.ಸಿ.ನಾಯಕ್ ಮಾರ್ಗದರ್ಶನದಲ್ಲಿ ‘ಗ್ಯಾಜೆಟ್ ಫ್ರೀ ಆಕ್ಟಿವಿಟಿ ಕಿಟ್ಸ್’ ಮೂಲಕ ಶಿಕ್ಷಣವನ್ನು ಸುಗಮಗೊಳಿಸುವ ಚಿಂತನೆ ಹೊರ ತಂದಿದೆ.
ಕೆಲವು ಚಟುವಟಿಕೆಗಳಿಗೆ ಕಿಟ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಕಲಿಕೆಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತದೆ. ಶಿಕ್ಷಕರು ವೈಯಕ್ತಿಕವಾಗಿ ಎಲ್ಲ ರೀತಿಯಲ್ಲಿ ಸೃಜನಶೀಲತೆ ಹೊಂದಿದ್ದು, ವಿದ್ಯಾರ್ಥಿ ಸ್ನೇಹಿ ಕಿಟ್ ಹೊರತರಲಾಗಿದೆ.
ಸಾಂಕ್ರಾಮಿಕ ಮಧ್ಯೆ ಚಟುವಟಿಕೆಯ ಕಿಟ್ಗಳನ್ನು ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಮತ್ತು ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಪ್ರತಿ ತಿಂಗಳ ಮೊದಲ ವಾರದಲ್ಲಿ ವಿದ್ಯಾರ್ಥಿಯ ಮನೆಗೆ ತಲುಪಿಸಲಾಗುತ್ತದೆ. ವಿದ್ಯಾರ್ಥಿಯು ಶೈಕ್ಷಣಿಕವಾಗಿ ಚಟುವಟಿಕೆಯಿಂದ ಇರಲು ಈ ಕಿಟ್ ಪೂರಕವಾಗಿದೆ. ಸಂಸ್ಥೆಯು ವಾರಕ್ಕೊಮ್ಮೆ ಆನ್ಲೈನ್ನಲ್ಲಿ ಪೋಷಕರೊಂದಿಗೆ ಸಂವಾದಾತ್ಮಕ ಅವಧಿಗಳನ್ನು ನಡೆಸುತ್ತದೆ.
‘ಗ್ಯಾಜೆಟ್ ಫ್ರೀ-ಆಕ್ಟಿವಿಟಿ ಕಿಟ್ಗೆ ಪೋಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಕಿಟ್ಗಳು ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿ ಇಡಲು ಸಹಕಾರಿಯಾಗಲಿದೆ’ ಎಂದು ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.