ADVERTISEMENT

ಪ್ರಾಣಿಗಳನ್ನು ಬೆದರಿಸಿ ಓಡಿಸುವ ಕೋವಿ..!

ಬೆಳೆ ರಕ್ಷಣೆಗಾಗಿ ಗೋಪಾಲ ಆಚಾರ್ಯರ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:44 IST
Last Updated 11 ಸೆಪ್ಟೆಂಬರ್ 2020, 2:44 IST
ಕೋವಿಯೊಂದಿಗೆ ಗೋಪಾಲ ಆಚಾರ್ಯರು
ಕೋವಿಯೊಂದಿಗೆ ಗೋಪಾಲ ಆಚಾರ್ಯರು   

ಬೆಳ್ತಂಗಡಿ: ಈ ಕೋವಿ ಹೆಗಲಿಗೇರಿಸಿಕೊಂಡು ತೋಟದಲ್ಲಿ ಅಥವಾ ಕೃಷಿ ಭೂಮಿಯ ಸುತ್ತ ಒಂದು ಸುತ್ತು ಹಾಕಿದರೆ ಕಾಡುಪ್ರಾಣಿ, ಮಂಗಗಳು ಸಮೀಪಕ್ಕೂ ಸುಳಿಯುವುದಿಲ್ಲ. ಕೋವಿಯಿಂದ ಹೊರಡುವ ಶಬ್ದಕ್ಕೆ ಬೆಚ್ಚಿ ಬೀಳುವ ಕಾಡು ಪ್ರಾಣಿಗಳು ಮತ್ತೊಮ್ಮೆ ತೋಟಕ್ಕೆ ನುಗ್ಗುವುದಿಲ್ಲ.

ಕಾಡು ಪ್ರಾಣಿಗಳ ಉಪಟಳದಿಂದ ಬೇಸತ್ತ ರೈತರಿಗೆ ಪರಿಹಾರ ರೂಪದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕರಿಮಣೇಲು ಗ್ರಾಮದ ಗಾಂಧಿನಗರಸಮೀಪದ ಗೋಪಾಲ ಆಚಾರ್ಯರುಕೋವಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ವತಃ ಕೃಷಿಕರು ಮತ್ತು ಬಡಗಿಯೂ ಆಗಿರುವ ಆಚಾರ್ಯರ ಸತತ ಪರಿಶ್ರಮದಿಂದ ಈ ರೈತ ಸ್ನೇಹಿ ಕೋವಿ ರೂಪುಗೊಂಡಿದೆ.

ಉತ್ತಮ ದರ್ಜೆಯ ಪೈಪ್‌ ಬಳಸಿ ಅಂದಾಜು ₹2,500ರಿಂದ ₹3 ಸಾವಿರ ವೆಚ್ಚದಲ್ಲಿ ಈ ಕೋವಿ ನಿರ್ಮಿಸಲಾಗಿದೆ. ನೋಡಲು ಅಸಲಿ ಕೋವಿಯಂತೆಯೇ ಇದೆ. ಮುಖ್ಯವಾಗಿ ಹಗಲು ವೇಳೆ ಮಂಗಗಳ ಹಾವಳಿ ಮತ್ತು ನವಿಲುಗಳ ಉಪಟಳ ಮತ್ತು ರಾತ್ರಿ ಹೊತ್ತು ಕಾಡು ಹಂದಿಗಳ ಹಾವಳಿಯನ್ನು ಈ ಕೋವಿ ಬಳಸಿ ಯಾವುದೇ ಅಪಾಯವಿಲ್ಲದೆ ಮಾಡಬಹುದು.

ADVERTISEMENT

ಈ ಕೋವಿಯಿಂದ ಪ್ರಾಣಿಗಳ ಅಥವಾ ಮನುಷ್ಯ ಜೀವಕ್ಕೆ ಯಾವುದೇ ಹಾನಿ ಇಲ್ಲ ಮತ್ತು ಮಹಿಳೆಯರು ಕೂಡ ಇದನ್ನು ಸುಲಭವಾಗಿ ಬಳಸಬಹುದು ಎನ್ನುವುದು ಈ ಕೋವಿಯ ಹೆಚ್ಚುಗಾರಿಕೆ.

‘ಈ ಕೋವಿ ಪ್ರಾಣಿಗಳನ್ನು ಬೆದರಿಸಲು ಉತ್ತಮ ಅಸ್ತ್ರ. ಇದರಿಂದ ಪ್ರಾಣಿಗಳ ಜೀವಕ್ಕೇನೂ ಅಪಾಯವಿಲ್ಲ. ಕಾಡು ಪ್ರಾಣಿಗಳ ತೊಂದರೆ ಅನುಭವಿಸುತ್ತಿರುವ ಕೃಷಿಕರು ಇದನ್ನು ಉಪಯೋಗಿಸಬಹುದು ಎನ್ನುತ್ತಾರೆ’ ವೇಣೂರು ಅರಣ್ಯಾಧಿಕಾರಿ ಪ್ರಶಾಂತ್.

’ಈ ಕೋವಿಯನ್ನು ಬಳಸಿದವರು ಒಳ್ಳೆಯ ಅಭಿಪ್ರಾಯ ತಿಳಿಸಿದರು. ತಮ್ಮ ತೋಟಗಳಲ್ಲಿ ಪ್ರಾಣಿಗಳ ಉಪಟಳ ಕಡಿಮೆಯಾಗಿದೆ ಎಂದಿದ್ದಾರೆ‘ ಎಂದು ಗೋಪಾಲ ಆಚಾರ್ಯರು ಹೇಳಿದರು. ಕೋವಿ ಬೇಕಿರುವ ಕೃಷಿಕರು 9113508252 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.