ADVERTISEMENT

ಎಚ್‌ಡಿಕೆ ಸರ್ಕಾರದ ಅಶಿಸ್ತಿನಿಂದ ಬೊಕ್ಕಸ ಖಾಲಿ

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:36 IST
Last Updated 10 ಫೆಬ್ರುವರಿ 2020, 12:36 IST
ಬಿ.ಜೆ.ಪುಟ್ಟಸ್ವಾಮಿ
ಬಿ.ಜೆ.ಪುಟ್ಟಸ್ವಾಮಿ   

ಮಂಗಳೂರು: ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿಯೇ ರಾಜ್ಯದ ಖಜಾನೆ ಖಾಲಿಯಾಗಿದೆ. ಇದಕ್ಕೆ ಕುಮಾರಸ್ವಾಮಿ ಮತ್ತು ಅವರ ಅಣ್ಣ ಎಚ್‌.ಡಿ.ರೇವಣ್ಣ ನೇರ ಕಾರಣ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದರು.

ಸರ್ಕಾರದ ಖಜಾನೆ ಖಾಲಿ ಆಗಿರುವ ಆರೋಪ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯ ಒಪ್ಪಿಗೆ ಇಲ್ಲದೆ, ವಿಧಾನ ಮಂಡಲದ ಅಂಗೀಕಾರ ಇಲ್ಲದೆ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಅಧಿಕಾರದಿಂದ ಕೆಳಕ್ಕೆ ಇಳಿಯುವುದು ಖಚಿತವಾಗುತ್ತಿದ್ದಂತೆ ಮನಸೋ ಇಚ್ಛೆ ಮಂಜೂರಾತಿ ನೀಡಿ, ಆರ್ಥಿಕ ವ್ಯವಸ್ಥೆಯನ್ನು ಹಳಿತಪ್ಪಿಸಿದ್ದಾರೆ. ಈಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯ ಮಂಜೂರಾತಿಗಿಂತ ಶೇಕಡ 50ರಷ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿದ್ದಾರೆ. ರೇವಣ್ಣ ಅವರ ಬಳಿ ಇದ್ದ ಲೋಕೋಪಯೋಗಿ ಇಲಾಖೆಯಲ್ಲೇ ₹ 55,000 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ನಡೆಸಲಾಗಿದೆ. ಎಲ್ಲವೂ ಸ್ವೇಚ್ಛಾಚಾರದಿಂದ ನಡೆದಿದೆ ಎಂದು ದೂರಿದರು.

ADVERTISEMENT

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತವನ್ನು ಜನರು ನೋಡಿದ್ದಾರೆ. ಇಬ್ಬರನ್ನು ಮಂತ್ರಿ ಮಾಡಿ ಸಿಂಗಪುರಕ್ಕೆ ಹಾರಿದ್ದ ಅವರು ಈಗ ಯಡಿಯೂರಪ್ಪ ಅವರನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ ಎಂದರು.

‘ಸಿದ್ಧರಾಮಯ್ಯ ಅವರು ದರಿದ್ರ ಸರ್ಕಾರ ಎನ್ನುತ್ತಿದ್ದಾರೆ. ಹಿಂದಿನ ಸರ್ಕಾರ ದರಿದ್ರ ಸ್ಥಿತಿಯಲ್ಲಿತ್ತು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಸರಿಯಾದ ದಾರಿಯಲ್ಲಿದೆ. ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.