ಪುತ್ತೂರು: ಜಿಲ್ಲೆಯಲ್ಲಿ ಕೆಲವು ಅಮಾಯಕರ ಹತ್ಯೆಯಾಗಿದ್ದು, ಈ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಈ ಘಟನೆಗಳಿಗೆ ಕಾರಣವೇನು ಎಂಬುದರ ಮಾಹಿತಿಯನ್ನು ಕಲೆ ಹಾಕಲು ಬಂದಿದ್ದೇನೆ ಎಂದುಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪುನಲ್ಲಿರುವ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ಸೋಮವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಸರ್ಕಾರದ ಗಮನಕ್ಕೆ ತಂದು ಪ್ರಕರಣಗಳಿಗೆ ಸಂಬಂಧಿಸಿದ ನಿಜವಾದ ಆರೋಪಿಗಳ ಮತ್ತು ಅದಕ್ಕೆ ಕಾರಣಕರ್ತರಾದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಹತ್ಯೆ ಮಾಡಿದವರ ತಲೆ ಕಡಿಯುತ್ತೇವೆ ಎಂಬ ಕಾಳಿಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ತಲೆ ತೆಗೆಯುವವರು ಸ್ವಾಮಿಗಳು ಆಗಲ್ಲ. ಅನಾಗರಿಕರಂತೆ ವರ್ತಿಸುವವರು, ರಾಕ್ಷಸೀಯ ವೃತ್ತಿ ಪಾಲನೆ ಮಾಡುವವರು ಸ್ವಾಮಿಗಳಾಗುವುದಿಲ್ಲ. ಯಾರು ಆ ರೀತಿಯ ಹೇಳಿಕೆ ನೀಡಿ ಸಮಾಜದಲ್ಲಿ ಕಲುಷಿತ ವಾತಾವರಣಕ್ಕೆ ಕಾರಣರಾಗುತ್ತಾರೋ ಅವರು ಸ್ವಾಮಿಗಳೇ ಅಲ್ಲ’ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಹಲವಾರು ಮಹಿಳೆಯರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟ, ಬಡವರ್ಗದ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಉದ್ಯೋಗ ನೀಡಿರುವ ಮಾಸ್ಟರ್ ಪ್ಲಾನರಿಯಂತಹ ಸಂಸ್ಥೆಯನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾಕೆ ಮಾಧವ ಗೌಡ, ಜೆಡಿಎಸ್ ಮುಖಂಡರಾದ ಎಂ.ಬಿ.ಸದಾಶಿವ, ಮಹಮ್ಮದ್ ಕುಂಞಿ ವಿಟ್ಲ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಪಕ್ಷದ ಪ್ರಮುಖರಾದ ದಯಾಕರ ಆಳ್ವ, ರತ್ನಾಕರ ಸುವರ್ಣ, ಪ್ರವೀಣ್ ಚಂದ್ರ ಜೈನ್, ಇಬ್ರಾಹಿಂ ಗೋಳಿಕಟ್ಟೆ, ಐ.ಸಿ.ಕೈಲಾಸ್ ಕೆದಂಬಾಡಿ, ಫೈಝಲ್ ರಹಿಮಾನ್ ಇದ್ದರು.
ಮಾಸ್ಟರ್ ಪ್ಲಾನರಿ ಮಾಲೀಕ ಎಸ್.ಕೆ.ಆನಂದ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.