ಜೈಲು (ಪ್ರಾತಿನಿಧಿಕ ಚಿತ್ರ)
ಪುತ್ತೂರು: ಮೂರು ವರ್ಷದ ಹಿಂದೆ ಪುತ್ತೂರು ನಗರದ ರಸ್ತೆಯೊಂದರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಪ್ರಕರಣದ ಅಪರಾಧಿಗೆ ಪುತ್ತೂರು ನ್ಯಾಯಾಲಯ 3 ತಿಂಗಳ ಕಠಿಣ ಶಿಕ್ಷೆ ವಿಧಿಸಿದೆ.
ಸುಳ್ಯ ತಾಲ್ಲೂಕಿನ ಕನಕಮಜಲು ನಿವಾಸಿ ಉಮ್ಮರ್ ಶಿಕ್ಷೆಗೊಳಗಾದ ವ್ಯಕ್ತಿ.
ನಗರದ ಬ್ಯಾಂಕ್ ಉದ್ಯೋಗಿಯಾಗಿದ್ದ ಮಹಿಳೆ 2021ರ ಆ.3ರಂದು ಮಧ್ಯಾಹ್ನ ಪುತ್ತೂರಿನ ಸರ್ಕಾರಿ ಆಸ್ಪತ್ರೆ ಸಂಪರ್ಕಿಸುವ ರಸ್ತೆ ಮೂಲಕ ತಾಯಿಯ ಮನೆಗೆ ಊಟಕ್ಕೆ ಹೋಗುತ್ತಿದ್ದ ವೇಳೆ ಕಿಲ್ಲೆ ಮೈದಾನದ ಬಳಿ ಆಟೊ ರಿಕ್ಷಾವೊಂದರಲ್ಲಿದ್ದ ಉಮ್ಮರ್, ಮಹಿಳೆಯನ್ನು ನೋಡಿ ಕೈಸನ್ನೆ ಮಾಡಿ ಕರೆದು ಅಸಭ್ಯವಾಗಿ ವರ್ತಿಸಿದ್ದ.
ಈ ಘಟನೆಯ ಬಳಿಕ ಆ.18ರಂದು ಸಂಜೆ ಮಹಿಳೆ ಕಿಲ್ಲೆ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಲ್ಲಿನ ಗೂಡಂಗಡಿ ಬಳಿ ಇದ್ದ ಉಮ್ಮರ್, ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಅಸಭ್ಯ ವರ್ತನೆ ತೋರಿದ್ದ. ಈ ಕುರಿತು ಮಹಿಳೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶೆ ಅರ್ಚನಾ ಉನ್ನಿತ್ತಾನ್ ಅವರು, 3 ತಿಂಗಳ ಕಠಿಣ ಶಿಕ್ಷೆ, ₹ 6 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.