ADVERTISEMENT

ಸುಳ್ಯ: ಕಸ ವಿಲೇವಾರಿಗೆ ಜಾಗ ಗುರುತಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:57 IST
Last Updated 18 ಜೂನ್ 2025, 15:57 IST
ಸುಳ್ಯ ಪಟ್ಟಣದಲ್ಲಿ ಕಸ ವಿಲೇವಾರಿ ಜಾಗ ಕುರಿತು ಸಚಿವರೊಂದಿಗೆ ಚರ್ಚಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ
ಸುಳ್ಯ ಪಟ್ಟಣದಲ್ಲಿ ಕಸ ವಿಲೇವಾರಿ ಜಾಗ ಕುರಿತು ಸಚಿವರೊಂದಿಗೆ ಚರ್ಚಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ   

ಸುಳ್ಯ‌: ಇಲ್ಲಿನ ‌ಪಟ್ಟಣ ಪಂಚಾಯಿತಿ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಂತೆ ಮುಖ್ಯಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಸೂಚನೆ‌ ನೀಡಿದರು.

ಪಟ್ಟಣ ಪಂಚಾಯಿತಿ ಮುಂಭಾಗದ ಶೆಡ್‌ನಲ್ಲಿರುವ ಕಸದ ರಾಶಿಗೆ ಪರಿಹಾರ‌ ನೀಡಬೇಕು. ಶೆಡ್ ವೀಕ್ಷಿಸುವಂತೆ‌ ಸಾರ್ವಜನಿಕರು ಕೇಳಿಕೊಂಡರು. ಸಚಿವ ದಿನೇಶ್ ಗುಂಡೂರಾವ್ ಕಸದ ರಾಶಿಯಿದ್ದ ಶೆಡ್‌ ಬಳಿ ಬಂದರು. ಈ ವೇಳೆ ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಜಾಗದ ಅಭಾವವಿದ್ದು, ಸೂಕ್ತ‌ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು‌ ಮನವಿ ಮಾಡಿದರು.

‘ ನಮ್ಮಲ್ಲಿ‌ ಜಾಗದ‌ ಕೊರತೆ ಇದೆ. ಅಧ್ಯಯನಕ್ಕಾಗಿ ನಾವು‌ ಕೈಗೊಂಡ ಪ್ರವಾಸಕ್ಕೆ ಕೆಲವರು ಆಕ್ಷೇಪ ಮಾಡಿದ್ದಾರೆ. ಇಲ್ಲ–ಸಲ್ಲದ ಮಾತನಾಡಿದ್ದಾರೆ. ನನಗೆ ಅವಮಾನವಾಗಿದೆ. ಮಾನನಷ್ಟ ಹೂಡುತ್ತೇನೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಶಶಿಕಲಾ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಾವು ಆಕ್ಷೇಪಿಸಿದ್ದು ಪ್ರವಾಸದ ವಿಚಾರಕ್ಕಲ್ಲ. ರಾಜ್ಯದ ಸಭಾಪತಿಗಳ ಬಗ್ಗೆ ಅವರು ಆಡಿದ‌ ಮಾತಿಗೆ‌ ನಾವೂ ಆಕ್ಷೇಪಿಸಿದ್ದೇವೆ’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್ ಹೇಳಿದರು. 

ಆಗ ಸಚಿವರು, ಯಾರೂ ಯಾರಿಗೂ ಅವಮಾನ ಮಾಡಬಾರದು. ಕಸ ವಿಲೇವಾರಿಗೆ ತಹಶೀಲ್ದಾರ್ ಜತೆ‌ ಚರ್ಚಿಸಿ ಸೂಕ್ತ ಜಾಗ ಗುರುತಿಸಿ ಎಂದು ಸ್ಥಳದಲ್ಲಿದ್ದ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.