ADVERTISEMENT

ಅಂತರರಾಷ್ಟ್ರೀಯ ವಿಜ್ಞಾನ ಮೇಳ: ಉಪ್ಪಿನಂಗಡಿಯ ಅಬ್ದುಲ್ ಬಾಶಿತ್ ಮಾದರಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:50 IST
Last Updated 15 ಜೂನ್ 2025, 13:50 IST
ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಶಿತ್ ಆವಿಷ್ಕರಿಸಿದ ‘ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ವಿಜ್ಞಾನ ಮಾದರಿ
ಉಪ್ಪಿನಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಶಿತ್ ಆವಿಷ್ಕರಿಸಿದ ‘ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ವಿಜ್ಞಾನ ಮಾದರಿ   

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಶಿತ್ ಜಪಾನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಮೂಲಕ ಗ್ರಾಮೀಣ ವಿದ್ಯಾರ್ಥಿಯೊಬ್ಬರು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಕಡವಿನಬಾಗಿಲು ನಿವಾಸಿ ಇಲಿಯಾಸ್ ಪಾಷ ಹಾಗೂ ಸಬಿಯಾ ಎಂಬುವರ ಪುತ್ರ ನಿವಾಸಿ ಅಬ್ದುಲ್ ಬಾಸಿತ್ ತಾನು ಅನ್ವೇಷಿಸಿದ ‘ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ಎಂಬ ವಿಜ್ಞಾನ ಮಾದರಿಯನ್ನು ಜಪಾನ್‌ನಲ್ಲಿ ಜೂನ್ 15ರಿಂದ 21ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ವಿಜ್ಞಾನ ಸಮ್ಮೇಳನ ‘ಸುಕುರಾ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸುವ ಇನ್ ಸ್ಪಾಯರ್ ಅವಾರ್ಡ್‌ ಮಾನಕ್ ಸ್ಪರ್ಧೆಯಲ್ಲಿ ಅಬ್ದುಲ್ ಬಾಷಿತ್ ತಯಾರಿಸಿದ ‘ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಇದೀಗ ಅಂತರರಾಷ್ತ್ರೀಯ ಮಟ್ಟಕ್ಕೆ ಆಯ್ಕೆಗೊಂಡಿತ್ತು. ಇದು ವಿಶೇಷ ಅಗತ್ಯವುಳ್ಳ ಮುಖ್ಯವಾಗಿ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಅನುಕೂಲವಾಗುವ ಮಾದರಿಯಾಗಿದೆ. ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲಾ ವಿಜ್ಞಾನ ಶಿಕ್ಷಕಿ ಕೃಷ್ಣವೇಣಿ ರೈ ಮಾರ್ಗದರ್ಶನದಲ್ಲಿ ಸಹಶಿಕ್ಷಕಿ ನಯನ ಹಾಗೂ ಸುಜಯ ಅವರ ಸಹಕಾರದಲ್ಲಿ ಈ ವಿಜ್ಞಾನ ಮಾದರಿಯನ್ನು ಅವಿಷ್ಕರಿಸಲಾಗಿತ್ತು.

ADVERTISEMENT

ಅಬ್ದುಲ್ ಬಾಶಿತ್  8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ವೇಳೆ ವಿಜ್ಞಾನ ಮಾದರಿಯನ್ನು ಆವಿಷ್ಕರಿಸಿದ್ದ. ಈತ ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. 

ನೋಂದಣಿಯಾಗಿದ್ದ 1,10,000 ವಿಜ್ಞಾನ ಮಾದರಿಗಳ ಪೈಕಿ 7,541 ಮಾದರಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿತ್ತು. ಇವುಗಳ ಪೈಕಿ 741 ಮಾದರಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದವು. ಅವುಗಳಲ್ಲಿ ಕೇವಲ 39 ಮಾದರಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದವು. ‘ಸುಕುರಾ’ ಎಂಬ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಸಲುವಾಗಿ ಜೂನ್‌ 13ರಂದು ಜಪಾನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸನ್ಮಾನ:

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ವತಿಯಿಂದ ಶುಕ್ರವಾರ ಅಬ್ದುಲ್ ಬಾಶಿತ್ರನ್ನು ಸನ್ಮಾನಿಸಿ ಜಪಾನ್ ದೇಶಕ್ಕೆ ಬೀಳ್ಕೊಡಲಾಯಿತು. ಈ ಸಂದರ್ಭ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ, ಅಧ್ಯಕ್ಷರಾದ ಯೂಸುಫ್ ಹಾಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.