ADVERTISEMENT

ಭಜನೆಯಿಂದ ಮನಃಪರಿವರ್ತನೆ: ಹೇಮಾವತಿ ಹೆಗ್ಗಡೆ

ಬೆಳ್ತಂಗಡಿಯಲ್ಲಿ ಜೈನ್ ಮಿಲನ್ ವಿಭಾಗಮಟ್ಟದ ಜಿನ ಭಜನಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 11:22 IST
Last Updated 15 ಡಿಸೆಂಬರ್ 2019, 11:22 IST
ಬೆಳ್ತಂಗಡಿಯಲ್ಲಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆಯನ್ನು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಭಾನುವಾರ ಉದ್ಘಾಟಿಸಿ ಮಾತನಾಡಿದರು
ಬೆಳ್ತಂಗಡಿಯಲ್ಲಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆಯನ್ನು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಭಾನುವಾರ ಉದ್ಘಾಟಿಸಿ ಮಾತನಾಡಿದರು   

ಉಜಿರೆ: ‘ದೇಹವನ್ನು ಸುಗಂಧ ದ್ರವ್ಯಗಳಿಂದ ಪರಿಶುದ್ಧಗೊಳಿಸಿದರೆ ಜಪ, ತಪ, ಧ್ಯಾನ, ಸತ್ಸಂಗ, ಭಜನೆ, ಪೂಜೆ ಮೊದಲಾದ ಕ್ರಿಯೆಗಳಿಂದ ನಮ್ಮ ಭಾವನೆಗಳು ಪರಿಶುದ್ಧವಾಗಿ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಭಜನೆಯಿಂದ ಮಾನಸಿಕ ಪರಿವರ್ತನೆ ಆಗುತ್ತದೆ’ ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು.

ಬೆಳ್ತಂಗಡಿಯಲ್ಲಿ ಜೈನ್ ಮಿಲನ್ ಆಯೋಜಿಸಿದ್ದ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸದಿಗೆ ಹೋದಾಗ ಎಲ್ಲರೂ ದರ್ಶನ ಸ್ತುತಿಯನ್ನು ಹಾಡಬೇಕು. ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ, ಶ್ಲೋಕಗಳನ್ನು, ಅಷ್ಟಕಗಳನ್ನು ಹೇಳಬೇಕು. ಜಾತಿ ಜೈನರು ನೀತಿ ಜೈನರೂ ಆಗಬೇಕು’ ಎಂದು ಅವರು ಸಲಹೆ ನೀಡಿದರು. ಜೈನರು ಕಡ್ಡಾಯವಾಗಿ ಮದ್ಯ ಮತ್ತು ಮಾಂಸ ತ್ಯಜಿಸಬೇಕು. ಲೌಕಿಕದ ಜೊತೆಗೆ ನಾವುಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳಬೇಕು. ದಿನನಿತ್ಯವೂ ದೇವರ ದರ್ಶನ, ಅಷ್ಟವಿಧಾರ್ಚನೆ ಪೂಜೆ, ಜಪ,ತಪ, ಧ್ಯಾನದೊಂದಿಗೆ ಕರ್ಮಗಳ ಕ್ಷಯ ಮಾಡಿ ಪುಣ್ಯ ಸಂಚಯಮಾಡಿಕೊಳ್ಳಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರತೀ ದಿನ ಅಷ್ಟವಿಧಾರ್ಚನೆ ಪೂಜೆ ಮಾಡಿ ಮೂರೂ ಹೊತ್ತು ಸ್ನಾನ ಮಡಿಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ’ ಎಂದು ಹೇಳಿದರು.

ADVERTISEMENT

‘ಪ್ರತೀ ಮನೆಯಲ್ಲಿಯೂ ಭಜನೆಯಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಭಜನಾ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ನಾವು ಹಸ್ತಾಂತರಿಸಿ ಆರೋಗ್ಯಪೂರ್ಣ , ಸುಸಂಸ್ಕೃತ ಸಮಾಜ ರೂಪಿಸಬಹುದು . ಅಲ್ಪಸಂಖ್ಯಾತರಾದ ಜೈನರು ತಮ್ಮ ಪರಿಶುದ್ಧ ಆಚಾರ-ವಿಚಾರ, ನಡೆ-ನುಡಿ ಹಾಗೂ ವ್ರತ-ನಿಯಮಗಳ ಪಾಲನೆಯೊಂದಿಗೆ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು’ ಎಂದು ಅವರು ಸಲಹೆ ನೀಡಿದರು.

25 ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವುದರೊಂದಿಗೆ ಹೇಮಾವತಿ ಹೆಗ್ಗಡೆಯವರು ಬೆಳ್ತಂಗಡಿ ಜೈನ್ ಮಿಲನ್ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ನೆರೆ ಸಂತ್ರಸ್ತರಾದ ನೇಮಿರಾಜ್ ಜೈನ್ ಮತ್ತು ಕಡಿರುದ್ಯಾವರದ ಉದಯ ಕುಮಾರ್ ಜೈನ್‌ ಅವರಿಗೆ ತಲಾ ₹25,000 ನೆರವು ನೀಡಲಾಯಿತು.

ಎಂದು ಅವರು ಪ್ರಕಟಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಪಡಂಗಡಿ ಭೋಜರಾಜ ಹೆಗ್ಡೆ ಉಪಸ್ಥಿತರಿದ್ದರು. ಉಜಿರೆಯ ಡಾ. ಬಿ. ಯಶೋವರ್ಮ, ಬಂಟ್ವಾಳದ ಸುದರ್ಶನ ಜೈನ್, ಡಾ. ಬಿ.ಪಿ. ಸಂಪತ್ ಕುಮಾರ್, ಜೈನ್ ಮಿಲನ್‌ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.