ಉಜಿರೆ: ಹದಿನೆಂಟು ಮಂದಿ ಜೈನ ಅರಸರು 400 ವರ್ಷಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ದಕ್ಷ ಆಡಳಿತ ನಡೆಸಿ ಧರ್ಮ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ನೀಡಿದ್ದಾರೆ’ ಎಂದು ಕಾರ್ಕಳದ ವಕೀಲ ಎಂ.ಕೆ. ವಿಜಯಕುಮಾರ್ ಹೇಳಿದರು.
ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾ ಭವನದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ಸೇವಾ ಕಳಕಳಿ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಆತ್ಮೀಯತೆಯೊಂದಿಗೆ ಭಾರತೀಯ ಜೈನ್ ಮಿಲನ್ ಇಂದು ರಾಷ್ಟ್ರಮಟ್ಟದಲ್ಲಿ ಸಂಪರ್ಕ ಸೇತುವಾಗಿ ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯನಿರ್ವಹಿಸುತ್ತಿದೆ. ಯುವಜನತೆ ಮತ್ತು ಮಹಿಳೆಯರು ಸ್ವಯಂಸ್ಪೂರ್ತಿಯಿಂದ ಜೈನ್ ಮಿಲನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.
‘ಜೈನ್ ಮಿಲನ್ನಿಂದಾಗಿ ಸಮಾಜದಲ್ಲಿ ಕ್ರಾಂತಿಕಾರಿ ಸುಧಾರಣೆಗಳಾಗಿವೆ’ ಎಂದ ಅವರು, ಡಾ. ನವೀನ್ ಕುಮಾರ್ ಜೈನ್, ಅಧ್ಯಕ್ಷರಾಗಿರುವ ಬೆಳ್ತಂಗಡಿ ತಾಲ್ಲೂಕು ಜೈನ್ ಮಿಲನ್ ಘಟಕದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಸಿ.ಇ.ಒ. ಪೂರಣ್ ವರ್ಮ, ಬಂಟ್ವಾಳದ ಬಿ. ಸುದರ್ಶನ ಜೈನ್ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ, ಬಜಗೋಳಿಯ ಜಯವರ್ಮ ಹೆಗ್ಡೆ, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಮ್ಯಾ ವಿಕಾಸ್ ಮತ್ತು ಬಿ. ಪ್ರಮೋದ್ ಕುಮಾರ್ ಇದ್ದರು. ಬಿ. ಸೋಮಶೇಖರ ಶೆಟ್ಟಿ ಪ್ರಮಾಣವಚನ ಬೋಧಿಸಿದರು.
ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಅಜಿತ್ ಕುಮಾರ್, ಬಿ. ಸೋಮಶೇಖರ ಶೆಟ್ಟಿ, ಶಾಂತಿರಾಜ ಜೈನ್, ಬಿ. ಮುನಿರಾಜ ಅಜ್ರಿ, ದೇವಪಾಲ ಅಜ್ರಿ ಮತ್ತು ಎನ್. ಪದ್ಮರಾಜ್ ಅವರನ್ನು ಗೌರವಿಸಲಾಯಿತು.
ಕಿಶೋರ್ ಹೆಗ್ಡೆ ಸ್ವಾಗತಿಸಿದರು. ಡಾ. ಸನ್ಮತಿಕುಮಾರ್ ವಂದಿಸಿದರು. ಮಹಾವೀರ ಜೈನ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.