ಸುಳ್ಯ: ಕೋಮಾದಲ್ಲಿದ್ದ ವೃದ್ದೆಯಬ್ಬರು ಬದುಕುವ ಸಾಧ್ಯತೆ ಇಲ್ಲ ಎಂದು ವ್ಯೆದ್ಯರು ಹೇಳಿದ ಕಾರಣ, ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಹುಷಾರಾಗಿದ್ದು, ಅಂತ್ಯಸಂಸ್ಕಾರಕ್ಕೆ ನಡೆದ ಸಿದ್ಧತೆ ರದ್ದುಗೊಂಡ ಘಟನೆ ನಡೆದಿದೆ.
ಮರ್ಕಂಜದ ಹೇಮಾವತಿ ರೈ (83) ಸಾವಿನ ದವಡೆಯಿಂದ ಪಾರಾದವರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೃತಕ ಉಸಿರಾಟದಲ್ಲಿದ್ದರು. ಕೃತಕ ಉಸಿರಾಟ ತೆಗೆದರೆ ಕೆಲವು ಗಂಟೆಗಳಲ್ಲಿ ಮೃತರಾಗಬಹುದು ಎಂದು ವ್ಯೆದ್ಯರು ಹೇಳಿದ್ದರು ಎನ್ನಲಾಗಿದೆ.
ಹೀಗಾಗಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಆಂಬ್ಯುಲೆನ್ಸ್ ನಲ್ಲಿ ಕರೆತರುತ್ತಿದ್ದಾಗ, ಮೇಲ್ಕಾರ್ ಬಳಿ ಕೆಮ್ಮುಲು ಶುರು ಮಾಡಿದ್ದಾರೆ. ಅಲ್ಲದೇ,ಮನೆಯವರ ಮಾತಿಗೆ ಸ್ಪಂದಿಸಲು ಆರಂಭಿಸಿದ್ದಾರೆ. ಇತ್ತ ಮನೆಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಯುತ್ತಿದ್ದು, ಮಾಹಿತಿ ಸಿಕ್ಕಿದ ತಕ್ಷಣವೇ ಸಿದ್ಧತೆ ಸ್ಥಗಿತಗೊಳಿಸಲಾಗಿದೆ.
‘ಈಗ ಅವರು ಚೇತರಿಸಿಕೊಂಡಿದ್ದಾರೆ. ಅವರ ಮೂಗಿಗೆ ಹಾಕಲಾದ ಪೈಪನ್ನೂ ತೆಗೆಯಲಾಗಿದೆ’ ಎಂದು ಅವರ ಮಗ ಜಗದೀಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.