ಉಜಿರೆ: ‘ಪರಿಶುದ್ಧ ಮನಸ್ಸಿನಿಂದ, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿಕಲ್ಪವಿಲ್ಲದೆ ದೃಢಸಂಕಲ್ಪದಿಂದ ಮಾಡುವ ಭಕ್ತಿಗೆ ವಿಶೇಷ ಶಕ್ತಿಯಿದ್ದು, ದೇವರ ಸಾಕ್ಷಾತ್ಕಾರವಾಗಿ ಭಕ್ತರು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವರಾತ್ರಿ ಸಂದರ್ಭ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಗೌರವಿಸಿ ಅವರು ಮಾತನಾಡಿದರು.
‘ನಿತ್ಯವೂ ನಿಗದಿತ ಸಮಯದಲ್ಲಿ ದೇವರ ಭಕ್ತಿ, ಧ್ಯಾನ, ಪ್ರಾರ್ಥನೆ ಮಾಡಿದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ಸುಲಲಿತವಾಗಿ ಪರಿಹಾರವಾಗುತ್ತವೆ. ದೇವರ ಸದಾ ಭಕ್ತರ ಜೊತೆಯಲ್ಲೇ ಇರುತ್ತಾರೆ. ದಾನ-ಧರ್ಮ, ಪರೋಪಕಾರ ಸೇವೆ ಮೊದಲಾದ ಸತ್ಕಾರ್ಯಗಳನ್ನು ಮಾಡುವಾಗ ಕಾಲಹರಣ ಮಾಡದೆ ತಕ್ಷಣ ಮಾಡಬೇಕು’ ಎಂದು ಸಲಹೆ ನೀಡಿದರು.
ಪ್ರತಿವರ್ಷವೂ ದೃಢಸಂಕಲ್ಪದೊಂದಿಗೆ ಜಾತಿ, ಮತ, ಅಂತಸ್ತಿನ ಭೇದ–ಭಾವ ಮರೆತು ದೈಹಿಕ ಶ್ರಮದೊಂದಿಗೆ ಶಿವರಾತ್ರಿ ಸಂದರ್ಭ ಧರ್ಮಸ್ಥಳಕ್ಕೆ ಬರುವ ಪಾದಯಾತ್ರಿಗಳು ಮಂಜುನಾಥ ಸ್ವಾಮಿಯ ಪರಮ ಭಕ್ತರಾಗಿದ್ದು, ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಪಾದಯಾತ್ರೆಯ ಮಾರ್ಗದರ್ಶಕ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ, ಹಾಸನದ ಸಂದೇಶ ಗೌಡ, ರಂಗೇಗೌಡ, ಸಿದ್ಧಪ್ಪ ಗೌಡ, ಮೋಹನ ಗೌಡ, ಸುರೇಶ ಗೌಡ ಮೊದಲಾದವರನ್ನು ಗೌರವಿಸಲಾಯಿತು. ಪಾದಯಾತ್ರಿಗಳ ವತಿಯಿಂದ ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.