ಮಂಗಳೂರು: ನುಡಿನಮನ, ಭರತನಾಟ್ಯ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದೊಂದಿಗೆ ಸ್ವರುಣ್ ಸ್ಮರಣಾಂಜಲಿ ಈಚೆಗೆ ನಗರದಲ್ಲಿ ನಡೆಯಿತು. ಕಲಾವಿದ, ಸಮಾಜಸೇವಕ ಆಗಿದ್ದ ಸ್ವರುಣ್ ಹೆಸರಿನಲ್ಲಿ ಸನಾತನ ನಾಟ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸಿದರು.
ಉಪನ್ಯಾಸ ನೀಡಿದ ಬೆಂಗಳೂರಿನ ಹಾರಿಕಾ ಮಂಜುನಾಥ್ ‘ಕಾಶ್ಮೀರವು ಭಾರತದ ಜ್ಞಾನ ಪುಂಜವಾಗಿದೆ. ಆದ್ದರಿಂದ ಅದು ಭಾರತ ಮಾತೆಯ ಸಿಂಧೂರ. ಅದನ್ನು ಕೇವಲ ಪ್ರವಾಸಿ ತಾಣಕ್ಕೆ ಸೀಮಿತಗೊಳಿಸುವುದು ಸರಿಯಲ್ಲ’ ಎಂದರು.
ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆ ಆಳಿದ ಊರು ಕಾಶ್ಮೀರ. ಅಗಾಧ ಗ್ರಂಥಗಳು ರೂಪುಗೊಂಡ, ತಪಸ್ವಿಗಳು, ಋಷಿಗಳು ಇದ್ದ ನಾಡು ಕಾಶ್ಮೀರ ಎಂದ ಅವರು ಅತಿ ಪ್ರಾಚೀನ ಎಂದು ಕರೆಸಿಕೊಂಡ ಗ್ರೀಕ್, ರೋಮನ್, ಲೆಬನಾನ್ ಮುಂತಾದ ಅನೇಕ ಜನಾಂಗಗಳು ಅಳಿಸಿ ಹೋದವು. ಸನಾತನ ಧರ್ಮದ ಮೇಲೆ ಸಾವಿರಕ್ಕೂ ಹೆಚ್ಚು ವರ್ಷ ದಾಳಿ ನಡೆದರೂ ಅಳಿಯದೇ ಉಳಿದಿದೆ. ಸನಾತನ ಹಿಂದೂ ಧರ್ಮ ಜಾಗೃತವಾಗಿದ್ದು ತಾಯಿ ಭಾರತಿಯ ಸಿಂಧೂರ ಕಾಪಾಡಲು ಆಕೆಯ ಮಕ್ಕಳು ಸದಾ ಜಾಗೃತರಾಗಿರುವುದು ಇದಕ್ಕೆ ಕಾರಣ ಎಂದರು.
ಸಣ್ಣ ವಯಸ್ಸಿನಲ್ಲಿ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿದ ಸ್ವರುಣ್ ಅವರ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್, ಸ್ವರುಣ್ ಅವರ ತಂದೆ ಸುರೇಶ್ ರಾಜ್ ಉಪಸ್ಥಿತರಿದ್ದರು. ದೆಹಲಿಯ ವಿದುಷಿ ಶುಭಾಮಣಿ ಮತ್ತು ಚೆನ್ನೈನ ವಿಜಯಕುಮಾರ್ ಎಸ್ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.