ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಗರದ ತುಳು ಪರಿಷತ್ ಆಯೋಜಿಸಿರುವ ತುಳು ವಿದ್ಯಾರ್ಥಿಗಳ ಸಮ್ಮೇಳನ ಇದೇ 26ರಂದು ಪುರಭವನದಲ್ಲಿ ನಡೆಯಲಿದೆ ಎಂದು ಪರಿಷತ್ನ ಅಧ್ಯಕ್ಷ ಶುಭೋದಯ ಆಳ್ವ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜು ವಿದ್ಯಾರ್ಥಿ, ಮಂಜನಾಡಿಯ ವಿಜೇತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಪೊಂಪೈ ಕಾಲೇಜು ವಿದ್ಯಾರ್ಥಿನಿ, ಐಕಳದ ಸನ್ನಿಧಿ ಉದ್ಘಾಟಿಸುವರು ಎಂದು ತಿಳಿಸಿದರು.
ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಆರಂಭವಾಗಲಿದ್ದು ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಸ್ತ್ರವಿನ್ಯಾಸ ಮತ್ತು ಅಲಂಕಾರ ಸ್ಪರ್ಧೆ 'ತುತ್ತೈತ’ ನಡೆಯಲಿದೆ. ಸಂಶೋಧಕಿ ಇಂದಿರಾ ಹೆಗ್ಡೆ ಅವರೊಂದಿಗೆ ಸಂವಾದ ಇರಲಿದ್ದು ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ ಅಂತಿಮ ಪರೀಕ್ಷೆಯಲ್ಲಿ 650ಕ್ಕೆ 650 ಅಂಕಗಳನ್ನು ಗಳಿಸಿದ ಆರಾಧನಾ ಶೆಣೈ ಅವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ತುಳು ಸಿನಿಮಾ ಮತ್ತು ನಾಟಕಗಳಿಗೆ ಹಾಡುಗಳನ್ನು ಬರೆದು ಹೆಸರು ಗಳಿಸಿರುವ ಭೋಜ ಸುವರ್ಣ ಅವರಿಗೆ ‘ಡಾ.ಪ್ರಭಾಕರ ನೀರುಮಾರ್ಗ ತುಳು ಪರಿಷತ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 5 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ ಎಂದರು.
ತುಳು ಪರಿಷತ್ ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ, ಪ್ರಮುಖರಾದ ಚಂದ್ರಕಲಾ ರಾವ್, ಸುಮತಿ ಹೆಗ್ಡೆ ಮತ್ತು ಅಮಿತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.