ಮಂಗಳೂರು: ಕೆಎಂಎಫ್ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಸುಮಾರು 150 ಜನರಿಂದ ₹ 2.50 ಕೋಟಿಗೂ ಅಧಿಕ ಹಣ ಪಡೆದು ಮೋಸ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ರಾಮ್ಪ್ರಸಾದ್ ಯಾನೆ ಹರೀಶ್ (37) ಬಂಧಿತ ಆರೋಪಿ.
ರಾಮ್ಪ್ರಸಾದ್ ತಾನು ಕೆಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು, ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಅಲ್ಲದೆ ಕೆಎಂಎಫ್ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವದಲ್ಲಿ 15 ದಿನಗಳ ತರಬೇತಿಯನ್ನು ಕೊಡಿಸಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಯನ್ನೂ ತೋರಿಸಿದ್ದು, ಪ್ರತಿಯೊಬ್ಬರಿಂದ ₹ 50ಸಾವಿರದಿಂದ ₹ 3.50 ಲಕ್ಷದವರೆಗೆ, ಗೂಗಲ್ ಪೇ, ಬ್ಯಾಂಕ್ ಖಾತೆ ವರ್ಗಾವಣೆ, ನಗದು ಹೀಗೆ ವಿವಿಧ ರೂಪದಲ್ಲಿ ಪಡೆದಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಕೆಎಂಎಫ್ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ಅನೇಕ ಅಮಾಯಕರು ಈತನಿಂದ ಮೋಸ ಹೋಗಿರುವುದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಆತನಿಂದ ಎಲ್ಲ ಮಾಹಿತಿ ಪಡೆದಿದ್ದಾರೆ. ನಂತರ ಪ್ರಸನ್ನ ರವಿ ನೇತೃತ್ವದಲ್ಲಿ ಮೋಸ ಹೋದವರು ಆತನನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.