ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಗುರುವಾರ ಮತ್ತೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೈದಿ ಮುಕ್ತಿಯರ್ ಎಂಬಾತ ಸಹ ಕೈದಿ ಕೇಶವ ಎಂಬಾತನ ಮೇಲೆ ಗುರುವಾರ ಮಧ್ಯಾಹ್ನ ಹಲ್ಲೆ ನಡೆಸಿದ್ದಾನೆ. ಕೈದಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸುವ ಸಂದರ್ಭದಲ್ಲಿ ಈ ಹೊಡೆದಾಟ ನಡೆದಿದೆ. ಗಾಯಗೊಂಡ ಕೈದಿ ಕೇಶವನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಹಲ್ಲೆಗೊಳಗಾದ ಕೈದಿ ಕೇಶವ ಪುತ್ತೂರಿನಲ್ಲಿ2023ರ ನವೆಂಬರ್ನಲ್ಲಿ ನಡೆದಿದ್ದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಆರೋಪಿ ಮಹಮದ್ ಮುಕ್ತಿಯಾರ್ 15 ಪ್ರಕರಣಗಳಲ್ಲಿ ಆರೋಪಿ. 2022ರ ಜುಲೈನಲ್ಲಿ ಕಾಲಿಗೆ ಗುಂಡಿಕ್ಕಿ ಆತನನ್ನು ಬಂಧಿಸಲಾಗಿತ್ತು.
ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ನಡುವೆ ತಿಂಗಳ ಹಿಂದಷ್ಟೇ ಹೊಡೆದಾಟ ನಡೆದಿತ್ತು. ಆ ಬಳಿಕ ಕಾರಾಗೃಹದ ಭದ್ರತೆ ಹೆಚ್ಚಿಸಲು ಕ್ರಮವಹಿಸಿದರೂ ಕೈದಿಗಳ ನಡುವಿನ ಹೊಡೆದಾಟ ಮರುಕಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.