ಸ್ಫೋಟ
ಸುರತ್ಕಲ್: ಇಲ್ಲಿನ ತಡಂಬೈಲ್ನ ವೆಂಕಟರಮಣ ಕಾಲೋನಿಯ ಮನೆಯೊಂದರಲ್ಲಿ ಬುಧವಾರ ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ವಸಂತಿ ( 68) ಹಾಗೂ ಅವರ ಸಹೋದರಿ ಪುಷ್ಪಾ(72) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸಿಲಿಂಡರ್ನಿಂದ ಅಡುಗೆ ಅನಿಲ ಸೋರಿಕೆಯಾಗಿತ್ತು. ಈ ವಿಚಾರ ತಿಳಿಯದೇ ವಸಂತಿ ಅವರು ಸ್ಟೌ ಹಚ್ಚಿದ್ದರು. ಆಗ ಅಡುಗೆ ಕೋಣೆಯ ತುಂಬಾ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಯ ಜ್ವಾಲೆಗಳು ಮನೆಯಿಡೀ ವ್ಯಾಪಿಸಿದ್ದವು. ಬೆಂಕಿಯಲ್ಲಿ ಸಿಲುಕಿದ್ದ ವಸಂತಿ ಜೋರಾಗಿ ಬೊಬ್ಬೆ ಹೊಡೆದು ಸಹಾಯ ಯಾಚಿಸಿದ್ದರು. ಆಗ ಪುಷ್ಪಾ ಅವರು ಅಲ್ಲಿಗೆ ಧಾವಿಸಿ ಬಾಗಿಲನ್ನು ದೂಡಿದ್ದು, ಅವರೂ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದರು. ಅವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನು ಹೊರಗೆಳೆದು ಬೆಂಕಿ ನಂದಿಸಲು ಯತ್ನಿಸಿದ್ದರು ಎಂದು ಗೊತ್ತಾಗಿದೆ.
ಗಾಯಾಳು ವಸಂತಿ ಅವರ ಪತಿ ವಾಮನ ಅವರು ಅಯ್ಯಪ್ಪ ವ್ರತಧಾರಿಯಾಗಿದ್ದು, ಮನೆ ಬಳಿಯಿರುವ ಕೋಣೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆ ಕೋಣೆಯಲ್ಲೂ ಎರಡು ಅಡುಗೆ ಅನಿಲ ಸಿಲಿಂಡರ್ಗಳಿದ್ದು, ಅವುಗಳಿಗೆ ಏನೂ ಆಗಿಲ್ಲ.
ಘಟನೆ ಸಂದರ್ಭ ಸ್ಫೋಟದ ಸದ್ದು ಕೇಳಿಸಿದ್ದು, ಚಾವಣಿಯ ಶೀಟ್ ಮೇಲಕ್ಕೆ ಹಾರಿಹೋಗಿದೆ. ಮನೆಯ ಹೊರಭಾಗದವರೆಗೂ ಬೆಂಕಿಯ ಕೆನ್ನಾಲಿಗೆ ಚಾಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ನಡೆದ ಬಳಿಕ ಅಡುಗೆ ಅನಿಲ ಪೂರೈಕೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಟೌಗೆ ಸಿಲಿಂಡರ್ನಿಂದ ಅಡುಗೆ ಅನಿಲ ಪೂರೈಸುವ ಕೊಳವೆ, ರೆಗ್ಯುಲೇಟರ್, ಸಿಲಿಂಡರ್ ಅನ್ನು ತಪಾಸಣೆ ನಡೆಸಿದ್ದಾರೆ. ರೆಗ್ಯುಲೇಟರ್ನಿಂದ ಅನಿಲ ಪೂರೈಸುವ ಕೊಳವೆಯಲ್ಲಿ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.