ಮಂಗಳೂರು: ಕಲಾ ಸಾಧಕ ಮತ್ತು ಸಮಾಜಸೇವಕ ಸ್ವರುಣ್ರಾಜ್ ಅವರ ಸ್ಮರಣಾರ್ಥ ನಗರದ ಸನಾತನ ನಾಟ್ಯಾಲಯ ಆಯೋಜಿಸಿರುವ ‘ಸ್ವರುಣ್ ಸ್ಮರಣಾಂಜಲಿ’ ಇದೇ 15ರಂದು ಸಂಜೆ 5.30ರಿಂದ ಪುರಭವನದಲ್ಲಿ ನಡೆಯಲಿದೆ.
ಇದು ಸ್ವರುಣ್ ಅವರ 12ನೇ ವರ್ಷದ ಸ್ಮರಣೆಯಾಗಿದ್ದು ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಸ್ವರುಣ್ರಾಜ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ರಾಜ್ ಭಾಗವಹಿಸುವರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸಲಿದ್ದು ಬೆಂಗಳೂರಿನ ಹಾರಿಕಾ ಮಂಜುನಾಥ್, ‘ಭಾರತ ಮಾತೆಯ ಸಿಂಧೂರ’ ವಿಷಯದ ಕುರಿತು ಉಪನ್ಯಾಸ ನೀಡುವರು.
ನಂತರ ನವದೆಹಲಿಯ ಶುಭಾಮಣಿ ಚಂದ್ರಶೇಖರ್ ಮತ್ತು ಚೆನ್ನೈನ ವಿಜಯಕುಮಾರ್ ಎಸ್ ಭರತನಾಟ್ಯ ಪ್ರಸ್ತುತಪಡಿಸುವರು. ಕಾಞಂಗಾಡ್ನ ವಿನೀತ್ ಪೂರವಂಕರ್ ಹಾಡುಗಾರಿಕೆಯಲ್ಲಿ, ಚೆನ್ನೈನ ಅಶ್ವಿನ್ ಸುಬ್ರಮಣ್ಯನ್ ಮೃದಂಗದಲ್ಲಿ ಮತ್ತು ಮಂಗಳೂರಿನ ಮೇಧಾ ಉಡುಪ ಕೊಳಲಿನಲ್ಲಿ ಸಹಕಾರ ನೀಡಲಿದ್ದಾರೆ.
ಪ್ರತಿ ಬಾರಿಯೂ ಸ್ವರುಣ್ ಸ್ಮರಣಾಂಜಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ. ಅದು ಜೀವ, ಜೀವನ, ಕಲೆ ಮತ್ತು ಅಪೂರ್ವ ವ್ಯಕ್ತಿತ್ವದ ನೆನಪು ಒಳಗೊಂಡಿರುತ್ತದೆ. ಸ್ವರುಣ್ ರಾಜ್ ಅವರು ಅತ್ಯಪೂರ್ವ ನೃತ್ಯ ಕಲಾವಿದರೂ ಸಮಾಜಕ್ಕೆ ಅಮೋಘ ಕೊಡುಗೆ ಕೊಟ್ಟ ವ್ಯಕ್ತಿಯೂ ಆಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಗುರುಗಳ ನೆಚ್ಚಿನ ವಿದ್ಯಾರ್ಥಿಯಾಗಿದ್ದರು. ಕಲೆಯ ಮೇಲೆ ಅವರಿಗಿದ್ದ ಅರ್ಪಣಾ ಭಾವ ಮತ್ತು ಆಸಕ್ತಿ ಗಮನಾರ್ಹ. ಅವರು ಸನಾತನ ನಾಟ್ಯಾಲಯ ಕುಟುಂಬದ ಸದಸ್ಯರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.